ಮಂಡ್ಯ: ‘ಹದಿಹರೆಯದ ಮಕ್ಕಳು ಮಾನಸಿಕ ಸ್ಥಿರತೆ ಕಾಪಾಡಲು ಶೈಕ್ಷಣಿಕ ಸಂಸ್ಥೆಗಳಲ್ಲಿ ಆಪ್ತ ಸಮಾಲೋಚನಾ (ಕೌನ್ಸೆಲಿಂಗ್) ಕೊಠಡಿ ಆರಂಭಿಸಿ. ಪ್ರತಿ ಶಾಲೆಯಲ್ಲಿ ಶಿಕ್ಷಕರಿಗೆ ಮಾನಸಿಕ ಒತ್ತಡ ನಿವಾರಣೆ ಕುರಿತು ಮನೋವೈದ್ಯರಿಂದ ತರಬೇತಿ ಕೊಡಿಸಿ’ ಎಂದು ಜಿಲ್ಲಾಧಿಕಾರಿ ಕುಮಾರ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಕ್ಕಳ ಮಾನಸಿಕ ಸ್ಥಿರತೆ ಮತ್ತು ದೈಹಿಕ ಯೋಗಕ್ಷೇಮ ಮೇಲ್ವಿಚಾರಣೆಯ ಸಂಬಂಧ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಹದಿಹರೆಯದ ಮಕ್ಕಳು ಮಾನಸಿಕ ಸ್ಥಿರತೆ ಕಳೆದುಕೊಂಡು ಸಣ್ಣ ಸಣ್ಣ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ದುರಂತವಾಗಿದೆ. ಇದನ್ನು ತಪ್ಪಿಸಲು ಒಬ್ಬರು ಶಿಕ್ಷಕರಿಗೆ ಮನೋವೈದ್ಯರಿಂದ ವಿಶೇಷ ತರಬೇತಿ ಕೊಡಿಸಿ, ಮಕ್ಕಳಿಗೆ ಮಾನಸಿಕ ಒತ್ತಡ ನಿವಾರಣೆ ಕುರಿತ ಸಲಹೆ ಸೂಚನೆಗಳನ್ನು ನೀಡುವಂತಾಗಬೇಕು’ ಎಂದು ತಿಳಿಸಿದರು.
ಶಾಲೆಯಲ್ಲಿ ದುರ್ಬಲ ಮನಸ್ಥಿತಿ ಹೊಂದಿರುವ ವಿದ್ಯಾರ್ಥಿಗಳನ್ನು ತರಬೇತಿ ಪಡೆದ ಶಿಕ್ಷಕರು ಗುರುತಿಸಿ ಅವರಿಗೆ ವಾರಕ್ಕೆ ಒಂದು ದಿನ ವಿಶೇಷ ಆಪ್ತ ಸಮಾಲೋಚನಾ ನಡೆಸಬೇಕು. ಶಾಲಾ ಕಾಲೇಜುಗಳು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಸೂಚಿಸಿದರು.
ತಾಲ್ಲೂಕು ಮಟ್ಟದಲ್ಲಿ ಮಕ್ಕಳ ಮೇಲ್ವಿಚಾರಣೆ ಸಮಿತಿ ರಚಿಸಿ. ಆತ್ಮಹತ್ಯೆಗೆ ಯತ್ನಿಸುವ ಮಕ್ಕಳ ಕುರಿತು ವಿಶೇಷ ಕಾಳಜಿ ವಹಿಸಿ, ಜೀವ ಉಳಿಸುವುದು. ಹದಿಹರೆಯದ ಮಕ್ಕಳಿಗೆ ಸೂಕ್ತ ತಿಳಿವಳಿಕೆ ಮತ್ತು ಅವರ ಮನಃಪರಿರ್ವತನೆ ಮಾಡಬೇಕು ಎಂದರು.
ಡಿಡಿಪಿಐ ಲೋಕೇಶ್, ಡಿಎಚ್ಒ ಡಾ.ಕೆ.ಮೋಹನ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಂಜುಳಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.