
ಪಾಂಡವಪುರ: ನಕಲಿ ಅಂಗವಿಕಲ ಪ್ರಮಾಣ ಪತ್ರ ನೀಡಿ ಕೆಲಸ ಗಿಟ್ಟಿಸಿದ ಆರೋಪ ಎದುರಿಸುತ್ತಿರುವ ಪಟ್ಟಣದ ಉರ್ದು ಶಾಲೆಯ ಶಿಕ್ಷಕ ಕೆ.ಚಂದ್ರಶೇಖರ (ಅಲಿಯಾಸ್ ಗಡ್ಡಚಂದ್ರ) ಅವರನ್ನು ರಾಜ್ಯ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪರೀಕ್ಷೆಗೊಳಪಡಿಸಲು ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತರು ಸೂಚಿಸಿದ್ದಾರೆ.
ಹಲವು ದಿನಗಳ ಹಿಂದೆಯೇ ಸಾಮಾಜಿಕ ಕಾರ್ಯಕರ್ತ ಕೋ.ಪು.ಗುಣಶೇಖರ್ ಎಂಬುವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಶಿಕ್ಷಣ ಇಲಾಖೆ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಶಿಕ್ಷಕನಿಗೆ ನಕಲು ಪ್ರಮಾಣ ಪತ್ರ ನೀಡಿದ್ದ ಮಿಮ್ಸ್ ಮತ್ತು ಮೈಸೂರಿನ ಕೆ.ಆರ್.ಆಸ್ಪತ್ರೆ ವೈದ್ಯರ ವಿರುದ್ದವೂ ದೂರು ಸಲ್ಲಿಸಲಾಗಿತ್ತು.
ಕೆ.ಚಂದ್ರಶೇಖರ್ ಅವರು ತಾನು ಅಂಗವಿಕಲನೆಂದು ಹೇಳಿ ವೈದ್ಯರ ಸಹಾಯದಿಂದ ನಕಲಿ ಪ್ರಮಾಣ ಪತ್ರವನ್ನು ಸೃಷ್ಟಿಸಿ ಶಿಕ್ಷಣ ಇಲಾಖೆಯನ್ನು ವಂಚಿಸಿ ಶಿಕ್ಷಕ ಹುದ್ದೆ ಪಡೆದಿದ್ದಾರೆ ಗುಣಶೇಖರ್ ಆರೋಪಿಸಿದ್ದರು.
ಶಿಕ್ಷಕ ಕೆ.ಚಂದ್ರಶೇಖರ್ (ಅಲಿಯಾಸ್ ಗಡ್ಡ ಚಂದ್ರ) ಅವರ ವಿರುದ್ಧ ಆರೋಪ ದೃಢಪಟ್ಟಲ್ಲಿ 2 ವರ್ಷ ಜೈಲು ಹಾಗೂ ₹1ಲಕ್ಷ ದಂಡ ವಿಧಿಸಲಾಗುತ್ತದೆ ಎಂದು ಡಿ.27ರಂದು ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಆಯುಕ್ತರು ಆದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.