ಶ್ರೀರಂಗಪಟ್ಟಣ: ಪಟ್ಟಣದ ಮಿನಿ ವಿಧಾನಸೌಧದ ಒಳಗೆ, ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜನ ಸಂಪರ್ಕ ಸಭೆ ನಡೆಯುತ್ತಿದ್ದ ವೇಳೆ ಮುಖ್ಯ ದ್ವಾರವನ್ನು ಸುಮಾರು ಎರಡು ತಾಸು ಬಂದ್ ಮಾಡಲಾಗಿತ್ತು.
ಮಿನಿ ವಿಧಾನಸೌಧದ ಒಳ ಆವರಣ ದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ತಮ್ಮ ಬೆಂಬಲಿಗರು, ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಅರ್ಜಿ ತಂದಿದ್ದ ಜನರನ್ನು ಕೂರಿಸಿಕೊಂಡು ಸಭೆ ನಡೆಸುತ್ತಿದ್ದರು. ಒಳಗೆ ಸಭೆ ನಡೆಯುವ ಸಂದರ್ಭದಲ್ಲಿ ಪೊಲೀಸರು ಮುಖ್ಯ ದ್ವಾರವನ್ನು ಬಂದ್ ಮಾಡಿದ್ದರು.
ಬೆಳಿಗ್ಗೆ 11 ಗಂಟೆಯಿಂದ 12.30ರ ವರೆಗೆ ಮುಖ್ಯ ದ್ವಾರವನ್ನು ಮುಚ್ಚಲಾಗಿತ್ತು. ಯಾರೂ ಒಳಗೆ ನುಸುಳದಂತೆ ಪೊಲೀಸರು ಕಾವಲು ಕಾಯುತ್ತಿದ್ದರು.
ಮುಖ್ಯ ದ್ವಾರವನ್ನೇ ಬಂದ್ ಮಾಡಿದ್ದರಿಂದ ಮಿನಿ ವಿಧಾನಸೌಧದ ಒಳಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಡಿತರ ಶಾಖೆ, ಸಬ್ ರಿಜಿಸ್ಟ್ರಾರ್ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಚುನಾವಣಾ ಶಾಖೆ, ಖಜಾನೆ ಇತರ ಕಚೇರಿಗಳಿಗೆ ಹೋಗುವವರ ತೊಂದರೆ ಅನುಭವಿಸಿದರು. ಬೆಳಿಗ್ಗೆ 10.30ಕ್ಕೆ ಮಿನಿ ವಿಧಾನಸೌಧದದ ಒಳಗೆ ಹೋದವರು ಈಚೆಗೆ ಬರಲಾರದೆ ಕಾದು ಬಸವಳಿದರು. ಹೊರಗೂ ನೂರಾರು ಮಂದಿ ಜಮಾಯಿಸಿದ್ದರು. ಮಿನಿ ವಿಧಾನಸೌಧದ ಮುಖ್ಯ ದ್ವಾರವನ್ನು ಬಂದ್ ಮಾಡಿದ್ದ ಕ್ರಮಕ್ಕೆ ಜನರು ಹಿಡಿಶಾಪ ಹಾಕಿದರು.
‘ಜನ ಸಂಪರ್ಕ ಸಭೆಯನ್ನು ಪೊಲೀಸ್ ಭದ್ರತೆಯಲ್ಲಿ, ಕಚೇರಿಯ ಬಾಗಿಲು ಹಾಕಿಕೊಂಡು ನಡೆಸುವ ಉದ್ದೇಶವೇನು? ಹತ್ತಾರು ಮೈಲಿಗಳಿಂದ ಬಂದಿರುವ ನಮ್ಮನ್ನು ಕಾಯಿಸುವುದೇಕೆ? ಶಾಸಕ, ಅಧಿಕಾರಿಗಳಿಗೆ ಬುದ್ಧಿ ಬೇಡವೇ?’ ಎಂದು ಮಹದೇವಪುರ ಜಯಮ್ಮ, ಚಿಕ್ಕಅಂಕನಹಳ್ಳಿ ರಾಜು, ಅರಕೆರೆ ಉಮಾಶಂಕರ್ ಅಸಮಾಧಾನ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.