ಶ್ರೀರಂಗಪಟ್ಟಣ: ತಾಲ್ಲೂಕಿನ ಬಲ್ಲೇನಹಳ್ಳಿಯಲ್ಲಿ ಮಂಗಳವಾರ ಶೂನ್ಯ ನೆರಳಿನ ಕೌತುಕ ಘಟಿಸಿ ನೋಡುಗರಲ್ಲಿ ಕುತೂಹಲ ಹುಟ್ಟಿಸಿತು.
ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಏರ್ಪಡಿಸಿರುವ ಬೇಸಿಗೆ ಶಿಬಿರದಲ್ಲಿ ಬೆಂಗಳೂರಿನ ಭಾರತೀಯ ಖಗೋಳ ಭೌತ ವಿಜ್ಞಾನ ಸಂಸ್ಥೆಯ ಸಂಶೋಧಕಿ ಸಂಜನಾ ಆನಂದ್ ಶೂನ್ಯ ನೆರಳಿನ ವಿದ್ಯಮಾನವನ್ನು ತೋರಿಸಿದರು. ಕಬ್ಬಿಣದ ಸರಳು, ಪ್ಲಾಸ್ಟಿಕ್ ಕೊಳವೆ ಮತ್ತು ಮೇಣದ ಬತ್ತಿಯನ್ನು ಲಂಬವಾಗಿ ನಿಲ್ಲಿಸಿ ಪ್ರಾತ್ಯಕ್ಷಿಕೆ ನೀಡಿದರು. ಮಧ್ಯಾಹ್ನ 12 ಗಂಟೆ 22 ನಿಮಿಷಕ್ಕೆ ಇಲ್ಲಿ ಶೂನ್ಯ ನೆರಳಿನ ವಿದ್ಯಮಾನ ಘಟಿಸಿತು. ಈ ವಿಶೇಷ ಸಂದರ್ಭವನ್ನು ಅಧಿಕಾರಿಗಳು ಹಾಗೂ ಶಿಬಿರಾರರ್ಥಿಗಳು ವೀಕ್ಷಿಸಿದರು.
ಕರ್ನಾಟಕದಲ್ಲಿ ಏ.20ರಿಂದ ಮೇ 12ರವರೆಗೆ ಶೂನ್ಯ ನೆರಳಿನ ವಿದ್ಯಮಾನ ಘಟಿಸುತ್ತದೆ. ಸೂರ್ಯನು ದಕ್ಷಿಣದಿಂದ ಉತ್ತರಕ್ಕೆ ತನ್ನ ಪಥ ಬದಲಿಸುವಾಗ ಈ ಕೌತುಕ ನಡೆಯುತ್ತದೆ. ಬೆಂಗಳೂರಿನಲ್ಲಿ ಏ.24ರಂದು, ಉಡುಪಿಯಲ್ಲಿ ಏ.25ರಂದು, ಶಿವಮೊಗ್ಗದಲ್ಲಿ ಏ.28ರಂದು ಈ ವಿದ್ಯಮಾನ ಘಟಿಸುತ್ತದೆ ಎಂದು ಸಂಜನಾ ಆನಂದ್ ತಿಳಿಸಿದರು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎ.ಬಿ. ವೇಣು, ನರೇಗಾ ಯೋಜನೆ ಸಹಾಯಕ ನಿರ್ದೇಶಕ ನಾಗೇಂದ್ರ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುರೇಸಕುಮಾರ್, ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕ ಕೂಡಲಕುಪ್ಪೆ ಸೋಮಶೇಖರ್, ಚುಸಾಪ ಅಧ್ಯಕ್ಷ ಕದಲಗೆರೆ ಜಯರಾಂ, ಕುಮಾರಸ್ವಾಮಿ, ಮಮತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.