ಮಂಡ್ಯ: ರಂಗಭೂಮಿ ಕಲೆಯನ್ನು ಉಳಿಸಿ, ಬೆಳೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.
ನಂಜಮ್ಮ ಮೋಟೇಗೌಡ ಚಾರಿಟ ಬಲ್ ಮತ್ತು ಎಜುಕೇಷನ್ ಟ್ರಸ್ಟ್, ಕೃಷಿಕ ಲಯನ್ಸ್ ಸಂಸ್ಥೆಯ ವತಿಯಿಂದ ನಗರದ ಕರ್ನಾಟಕ ಸಂಘದ ಆವರಣದಲ್ಲಿರುವ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ರಂಗಗೀತೆ ಸ್ಪರ್ಧೆ, ರಂಗಭೂಮಿ ಹಿರಿಯ ಕಲಾವಿದರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಂಗಭೂಮಿ ಸಮಾಜದ ಪ್ರತಿಬಿಂಬವಾಗಿದ್ದು, ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸವನ್ನು ಮಾಡು ತ್ತಿದೆ. ರಂಗಭೂಮಿಗೆ ಸಾಮಾಜಿಕ ವ್ಯವಸ್ಥೆಯಲ್ಲಿ ವಿಶಿಷ್ಟವಾದ ಸ್ಥಾನ ವಿದ್ದು, ಜಿಲ್ಲೆಯ ರಂಗಭೂಮಿಯ ಗತವೈಭವವನ್ನು ನಾವು ಮರೆಯಲು ಸಾಧ್ಯವಿಲ್ಲ. ರಂಗಭೂಮಿ ವೈಭವವನ್ನು ಮತ್ತೆ ಮರುಕಳಿಸುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಕೃಷಿಕ ಲಯನ್ ಸಂಸ್ಥೆಯ ಪೋಷಕ ಕೆ.ಟಿ.ಹನುಮಂತು ಮಾತನಾಡಿ, ಜನಸಾಮಾನ್ಯರ ವಿಶ್ವವಿದ್ಯಾಲಯ ರಂಗಭೂಮಿಯಾಗಿದ್ದು, ಮುಂದಿನ ಪೀಳಿಗೆಗೆ ರಂಗಭೂಮಿ ಕಲೆಯನ್ನು ಹಸ್ತಾಂತರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಪರಿಸರ ಸಂಸ್ಥೆಯ ಮಂಗಲ ಎಂ.ಯೋಗೇಶ್, ಸಾಹಿತಿ ಸತೀಶ್ ಜವರೇಗೌಡ, ಕಲಾಪೋಷಕ ಬಿ.ಎಂ.ಅಪ್ಪಾಜಪ್ಪ, ರಂಗಭೂಮಿ ನಿರ್ದೇಶಕ ಕಾರಸವಾಡಿ ಸುರೇಶ್, ಗೊರವಾಲೆ ಚಂದ್ರಶೇಖರ್, ಸಂತೆಕಸಲಗೆರೆ ಬಸವರಾಜ್, ಕೃಷಿಕ ಲಯನ್ ಸಂಸ್ಥೆ ಅಧ್ಯಕ್ಷ ಶಶಿಧರ್ ಈಚಗೆರೆ, ಕೆ.ಎಸ್.ಹೊನ್ನೇಗೌಡ ಇದ್ದರು.
ರಂಗಗೀತೆ ಸ್ಪರ್ಧೆ ವಿಜೇತರು: ಮೃತ್ಯುಂಜಯ ಮಳವಳ್ಳಿ (ಪ್ರಥಮ), ಭೂಮಿಕಾ ಮೈಸೂರು (ದ್ವಿತೀಯ), ಕೆಂಚೇಗೌಡ ಕಾಳೇನಹಳ್ಳಿ (ತೃತೀಯ) ಹಾಗೂ ಸರ್ವಮಂಗಳ ಮಂಡ್ಯ, ಮಹದೇವಸ್ವಾಮಿ ಗಾಮನಹಳ್ಳಿ, ಜವರಯ್ಯ ದಡದಪುರ, ರಮೇಶ್ ಬೆಳ್ಳೂರು ಕ್ರಾಸ್, ಮಂಜುನಾಥ್ ಭೂತನಹೊಸೂರು, ಪುಟ್ಟರಾಜ ಬೆಳತೂರು ಸಮಾಧಾನಕರ ಬಹುಮಾನ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.