ADVERTISEMENT

ಮೇಲುಕೋಟೆ: ವೈಭವದ ಮಕರ ಸಂಕ್ರಾಂತಿ ಉತ್ಸವ

ಇಂದು ಅಂಗಮಣಿ ಉತ್ಸವ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 14:47 IST
Last Updated 15 ಜನವರಿ 2020, 14:47 IST
15ಎಂ.ಎಲ್.ಕೆ ೧ ಮೇಲುಕೋಟೆಯಲ್ಲಿ ನಡೆದ ಸಂಕ್ರಾಂತಿ ಉತ್ಸವದ ಪುಷ್ಪಕೈಂಕರ್ಯ ಸೇವೆಗಾಗಿ ಬದರೀನಾರಾಯಣಸ್ವಾಮಿ ದೇವಾಲಯದಲ್ಲಿ ಹಣ್ಣಿನ ತಟ್ಟೆಗಳನ್ನು ಜೋಡಿಸಿರುವ ದೃಶ್ಯ
15ಎಂ.ಎಲ್.ಕೆ ೧ ಮೇಲುಕೋಟೆಯಲ್ಲಿ ನಡೆದ ಸಂಕ್ರಾಂತಿ ಉತ್ಸವದ ಪುಷ್ಪಕೈಂಕರ್ಯ ಸೇವೆಗಾಗಿ ಬದರೀನಾರಾಯಣಸ್ವಾಮಿ ದೇವಾಲಯದಲ್ಲಿ ಹಣ್ಣಿನ ತಟ್ಟೆಗಳನ್ನು ಜೋಡಿಸಿರುವ ದೃಶ್ಯ   

ಮೇಲುಕೋಟೆ: ಮಕರ ಸಂಕ್ರಾಂತಿ ನಿಮಿತ್ತಬುಧವಾರ ರಾತ್ರಿ ಚೆಲುವನಾರಾಯಣಸ್ವಾಮಿ ಉತ್ಸವ ವೈಭವದಿಂದ ನೆರವೇರಿತು.

4ನೇ ಸ್ವಾಮ್ಯದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಕುಟುಂಬ ಚೆಲುವನಾರಾಯಣಸ್ವಾಮಿ, ರಾಮಾನುಜಾಚಾರ್ಯರಿಗೆ ಅನೂಚಾನ ಸಂಪ್ರದಾಯದಂತೆ ಪುಷ್ಪ ಕೈಂಕರ್ಯ ನೆರವೇರಿಸಿದ ನಂತರ ಕೊಠಾರ ಮಂಟಪದಲ್ಲಿ ಸಂಕ್ರಾಂತಿ ಫಲಪಠಣ, ದೇವಾಲಯದಲ್ಲಿ ಅರೆಯರ್ ತಾಲಾಟ್ಟಿನೊಂದಿಗೆ ವಸಂಗರಾಗ ಕಾರ್ಯಕ್ರಮ ಸಹ ವೈಭವದಿಂದ ನೆರವೇರಿತು.

ಮಕರ ಸಂಕ್ರಮಣದ ವೇಳೆ ಸ್ವಾಮಿಗೆ ವೈವಿಧ್ಯಮಯ ಪುಷ್ಪಗಳಿಂದ ಅಲಂಕಾರ ಮಾಡಿ ಉತ್ಸವ ನಡೆಸಲಾಯಿತು. ವಿವಿಧ ಹಣ್ಣುಗಳ ತಟ್ಟೆಗಳನ್ನು ಬದರೀನಾರಾಯಣನ ಸನ್ನಿಧಿಯಲ್ಲಿ ಜೋಡಿಸಿ ಚೆಲುವನಿಗೆ ಉತ್ಸವ ವೇಳೆ ನೈವೇದ್ಯ ಅರ್ಪಿಸಲಾಯಿತು. ಬೆಳಿಗ್ಗೆ ಅಭಿಷೇಕ ಸಹ ನೆರವೇರಿತು.

ADVERTISEMENT

ಅಂಗಮಣಿ ಉತ್ಸವ ಇಂದು: ಜ. 16ರಂದು (ಗುರುವಾರ) ದೇವಾಲಯದಲ್ಲಿ ಶ್ರೀದೇವಿ ಮತ್ತು ಭೂದೇವಿಯರಿಗೆ ಪ್ರಖ್ಯಾತ ಅಂಗಮಣಿ ಉತ್ಸವ ನಡೆಯಲಿದೆ. ಸಜ್ಜೆಹಟ್ಟಿ ಮಂಟಪದಲ್ಲಿ ರಾತ್ರಿ 8ಗಂಟೆಗೆ ದೇವಿಯರಿಗೆ ಮಡಿಲು ತುಂಬುವ ಕೈಂಕರ್ಯ ನಡೆಯಲಿದೆ.

3ನೇ ಸ್ಥಾನೀಕ ತಿರುನಾರಾಯಣ ಅಯ್ಯಂಗಾರ್ ಮನೆಯಲ್ಲಿ ನೂರಾರು ತಟ್ಟೆಗಳಲ್ಲಿ ಹಣ್ಣು ಹೂಗಳನ್ನು ಜೋಡಿಸಲಾಗುತ್ತದೆ. ಇದೇ ಮಾದರಿಯಲ್ಲಿ ಒಂದನೇ ಸ್ಥಾನೀಕರ ಮನೆಯಲ್ಲೂ ಹಣ್ಣುಗಳನ್ನು ಜೋಡಿಸಿ, ದೇವಿಯರಿಗೆ ಅರ್ಪಿಸಿ ಶುಕ್ರವಾರ ಕದಂಬ ಪ್ರಸಾದ ತಯಾರಿಸಿ ಭಕ್ತರಿಗೆ ವಿತರಣೆ ಮಾಡಲಾಗುತ್ತದೆ. ಸ್ಥಾನೀಕ ಸಂಪತ್‌ಕುಮಾರನ್ ನೇತೃತ್ವದಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು ಅಂಗಮಣಿ ಮಂಟಪ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಇದಕ್ಕೂ ಮುನ್ನ ದೇವಾಲಯದಲ್ಲಿ ದೇವಿಯರಿಗೆ ಅಭಿಷೇಕ ಮತ್ತು ಕಲ್ಯಾಣಿಗೆ ಉತ್ಸವ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.