ಮದ್ದೂರು: ಬುಧವಾರ ಸಾರಿಗೆ ನಿಗಮದ ನೌಕರರ ಮುಷ್ಕರದ ನಡುವೆಯೂ ಮದ್ದೂರು ಘಟಕದಿಂದ ಎರಡು ಬಸ್ಗಳು ಪೊಲೀಸ್ ಭದ್ರತೆಯೊಂದಿಗೆ ಸಂಚಾರ ನಡೆಸಿದವು.
ಮದ್ದೂರು ಘಟಕದ ಇಬ್ಬರು ಚಾಲಕ, ನಿರ್ವಾಹಕರು ಬುಧವಾರ ಕರ್ತವ್ಯಕ್ಕೆ ಹಾಜರಾಗಿದ್ದರು. ಅವರನ್ನು ಮದ್ದೂರು–ಕೊಪ್ಪ ಮಾರ್ಗಕ್ಕೆ ನಿಯೋಜಿಸಲಾಗಿತ್ತು.
ಮದ್ದೂರು- ಕೊಪ್ಪ ಮಾರ್ಗದಲ್ಲಿ ನಿತ್ಯವೂ ಕರ್ತವ್ಯ ನಿರ್ವಹಿಸುತ್ತಿದ್ದ ಜಯರಾಮು ನಿರ್ವಾಹಕ ಹಾಗೂ ಚಾಲಕರಾಗಿ ಕೆಲಸ ಮಾಡಿದರು. ಇನ್ನೊಂದು ಬಸ್ನಲ್ಲಿ ಚಾಲಕರಾಗಿ ಶಂಕರಯ್ಯ, ನಿರ್ವಾಹಕರಾಗಿ ಬೋರೇಗೌಡ ಸೇವೆ ಒದಗಿಸಿದರು. ಅವರ ಈ ನಡೆಗೆ ಸಾರ್ವಜನಿಕರು, ಇಲಾಖೆ ಅಧಿಕಾರಿಗಳೂ ಶ್ಲಾಘಿಸಿದರು.
‘ಪ್ರಜಾವಾಣಿ’ಯೊಂದಿಗೆ ಮಾತನಾಡಿದಜಯರಾಮು, ಸುಮಾರು 1 ವರ್ಷದಿಂದ ಕೊರೊನಾ ದಿಂದಾಗಿ ಸಾರಿಗೆ ಸಂಸ್ಥೆಗೆ ನಷ್ಟವಾಗಿರುವುದನ್ನು ನೌಕರರಾದ ನಾವು ಮನಗಾಣಬೇಕು. ಕೊರೊನಾ ಮುಕ್ತವಾದಾಗ ವೇತನ ಹೆಚ್ಚಿಸಲು ಬೇಡಿಕೆ ಸಲ್ಲಿಸುವುದರಲ್ಲಿ ಅರ್ಥವಿದೆ ಎಂಬುದು ನನ್ನ ಭಾವನೆ. ಇದನ್ನು ಎಲ್ಲ ನೌಕರರು ಅರ್ಥ ಮಾಡಿಕೊಳ್ಳಬೇಕು. ಇಂಥ ಸನ್ನಿವೇಶದಲ್ಲಿ ಮುಷ್ಕರ ಮಾಡುತ್ತಾ ಹೋದರೆ ಸಂಸ್ಥೆಗೆ, ನೌಕರರಿಗೆ ಹಾಗೂ ಸಾರಿಗೆ ಸಂಸ್ಥೆಯ ಬಸ್ಸುಗಳನ್ನೇ ಅವಲಂಬಿಸಿರುವ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.