ಶ್ರೀರಂಗಪಟ್ಟಣ: ಇಲ್ಲಿಗೆ ಸಮೀಪದ ದೊಡ್ಡ ಗೋಸಾಯಿಘಾಟ್ ಬಳಿ ಹಾಗೂ ಪಟ್ಟಣದ ಬೇಸಿಗೆ ಅರಮನೆ ಮುಂದೆ ನಿರ್ಮಿಸಿದ್ದ ಅನಧಿಕೃತ ಶೆಡ್ ಮತ್ತು ಕಟ್ಟಡಗಳನ್ನು ಶನಿವಾರ ತೆರವುಗೊಳಿಸಲಾಯಿತು.
ತಾಲ್ಲೂಕು ಆಡಳಿತ ಮತ್ತು ಪುರಸಭೆ ಜಂಟಿ ಕಾರ್ಯಾಚರಣೆ ನಡೆಸಿ ಅನಧಿಕೃತ ಶೆಡ್ಗಳು ಮತ್ತು ಕಟ್ಟಡಗಳನ್ನು ತೆರವು ಮಾಡಿಸಿದವು.
ಗೋಸಾಯಿಘಾಟ್ ಬಳಿ ಕಾವೇರಿ ನದಿ ತೀರದಲ್ಲಿ ಈಚೆಗೆ ಹಲವು ಖಾಸಗಿ ಶೆಡ್ಗಳು ತಲೆ ಎತ್ತಿದ್ದವು. ಅಸ್ಥಿ ವಿಸರ್ಜನೆ, ಪಿಂಡ ಪ್ರದಾನ ಇತರ ಕೈಂಕರ್ಯಗಳನ್ನು ನಡೆಸುವ ಉದ್ದೇಶದಿಂದ ಸ್ಥಳೀಯರು ಶೆಡ್ಗಳನ್ನು ನಿರ್ಮಿಸಿ
ಕೊಂಡಿದ್ದರು. ಈ ಬಗ್ಗೆ ದೂರುಗಳು ಬಂದಿದ್ದವು.
ಅನಧಿಕೃತ ಕಟ್ಟಡ ಮತ್ತು ಶೆಡ್ಗಳನ್ನು ತೆರವು ಮಾಡುವ ವೇಳೆ ಕೆಲವರು ಪ್ರತಿರೋಧ ತೋರಿದರು. ಪೊಲೀಸ್ ಬಂದೋಬಸ್ತ್ನಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಪಟ್ಟಣದ ಟಿಪ್ಪು ಬೇಸಿಗೆ ಅರಮನೆ ಮುಂದೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ನಿಯಮ ಉಲ್ಲಂಘಿಸಿ ವಾಣಿಜ್ಯ ಮಳಿಗೆ ನಿರ್ಮಿಸಲಾಗಿತ್ತು. ಈ ಮಳಿಗೆ ತೆರವು ಮಾಡಿಸುವಂತೆ ಹೈಕೋರ್ಟ್ ಆದೇಶ ಮಾಡಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ನಸುಕಿನಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಮತ್ತೆ ಅನಧಿಕೃತ ಕಟ್ಟಡ ಅಥವಾ ಶೆಡ್ ನಿರ್ಮಿಸಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಹಶೀಲ್ದಾರ್ ಎಂ.ವಿ.ರೂಪಾ ಎಚ್ಚರಿಸಿದರು.
ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.