ADVERTISEMENT

‘ರೈತ, ಜನಪರ ಚಳವಳಿ ಒಗ್ಗೂಡಲಿ’

ವಿಶ್ವ ರೈತ ದಿನಾಚರಣೆ, ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಜನ್ಮದಿನಾಚರಣೆಯಲ್ಲಿ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 19:54 IST
Last Updated 23 ಡಿಸೆಂಬರ್ 2020, 19:54 IST
ಪಾಂಡವಪುರದಲ್ಲಿ ನಡೆದ ವಿಶ್ವ ರೈತ ದಿನಾಚರಣೆಯಲ್ಲಿ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು
ಪಾಂಡವಪುರದಲ್ಲಿ ನಡೆದ ವಿಶ್ವ ರೈತ ದಿನಾಚರಣೆಯಲ್ಲಿ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು   

ಪಾಂಡವಪುರ: ರೈತ ಸಂಘಟನೆಗಳು ಸೇರಿದಂತೆ ಎಲ್ಲ ಜನಪರ ಚಳವಳಿಗಳು ಒಂದಾಗಿ ಇಂದು ಎದುರಾಗಿರುವ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸದಿದ್ದರೆ ರೈತನ ಬದುಕು ಬೀದಿಗೆ ಬೀಳಲಿದೆ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

‌ಪಟ್ಟಣದಲ್ಲಿ ರಾಜ್ಯ ರೈತ ಸಂಘದ ತಾಲ್ಲೂಕು ಘಟಕ ಹಾಗೂ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅಭಿಮಾನಿಗಳು ಬುಧವಾರ ಆಯೋಜಿಸಿದ್ದ ರೈತ ದಿನಾಚರಣೆ ಹಾಗೂ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ 71ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾ ರವು ಕಾರ್ಪೊರೇಟ್‌ ಕಂಪನಿಗಳಿಗೆ ರತ್ನಗಂಬಳಿ ಹಾಸುತ್ತಿವೆ. ಕಾರ್ಪೊರೇಟ್‌ ಪರಿವಾರವು ಸಂಘ ಪರಿವಾರ ಸರ್ಕಾರದ ಪರವಾಗಿ ನಿಂತಿವೆ. ಈ ಸರ್ಕಾ ರಗಳ ಭೂಮಿ ಮತ್ತು ಕೃಷಿ ನೀತಿಗಳು ರೈತನನ್ನು ಒಕ್ಕಲೆಬ್ಬಿಸಲಿವೆ ಎಂದರು.

ADVERTISEMENT

ಉತ್ತರ ಭಾರತದ ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದರೆ ಕೇಂದ್ರ ಸರ್ಕಾರವು ಮೌನವಹಿಸಿದೆ. ಚಳವಳಿಕಾರರೊಂದಿಗೆ ಮಾತುಕತೆ ನಡೆಸುವ ಸೌಜನ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರಾಗಲೀ, ಗೃಹಮಂತ್ರಿ ಅಮಿತ್ ಷಾ ಆಗಲಿ ತೋರುತ್ತಿಲ್ಲ ಎಂದು ದೂರಿದರು.

ದೆಹಲಿ ಚಲೋ ಚಳವಳಿಯಲ್ಲಿ ಭಾಗಿ: ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಬೆಂಬಲಿಸಿ ರಾಜ್ಯದಿಂದ ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿಯ 25ಮಂದಿ ಸದಸ್ಯರು ಡಿ.24 ಮತ್ತು 25ರಂದು ದೆಹಲಿಗೆ ತೆರಳಿ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ರೈತರ ಸಮಾವೇಶ: ರೈತ ಸಂಘಕ್ಕೆ ಸಂಘಟನೆಯ ಸಂವಿಧಾನ ಸಿದ್ಧಗೊಳಿ ಸಲಾಗಿದ್ದು, 2021 ಫೆ.18 ರಂದು ರೈತ ಸಮಾವೇಶ ನಡೆಸಿ ಬಿಡುಗಡೆ ಗೊಳಿಸಲಾಗುವುದು ಎಂದರು.

ಮುನ್ನೆಡೆಯಿರಿ: ‘ಪತಿ, ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಇಲ್ಲದಿದ್ದರೂ ಕಾರ್ಯಕರ್ತರು ರೈತ ಸಂಘಟನೆಯನ್ನು ಮುನ್ನೆಡೆಸುತ್ತಿರುವುದು ಸಂತಸ ತಂದಿದೆ. ಸಣ್ಣಪುಟ್ಟ ಮನಸ್ತಾಪಗಳನ್ನು ಬದಿಗೊತ್ತಿ ಪುಟ್ಟಣ್ಣಯ್ಯನವರ ಹೋರಾಟವನ್ನು ಮುನ್ನೆಡೆಸಿ’ ಎಂದು ಸುನೀತಾ ಪುಟ್ಟಣ್ಣಯ್ಯ ಹೇಳಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕಾಡೆಹರೀಶ್, ಮೈಸೂರು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹೊಸಕೋಟೆಬಸವರಾಜು, ಮಂಡ್ಯ ಅರ್ಗ್ಯಾನಿಕ್‌ ಸಂಸ್ಥೆಯ ಪ್ರಸನ್ನ ಎನ್‌.ಗೌಡ, ಮುಖಂಡರಾದಸ್ಮಿತಾಪುಟ್ಟಣ್ಣಯ್ಯ, ಕೆ.ಟಿ.ಗೋವಿಂದೇಗೌಡ, ಎಸ್.ದಯಾನಂದ, ಕೋಟಿ ಶಂಕರೇಗೌಡ, ಕೆನ್ನಾಳುವಿಜಕುಮಾರ್, ಹೊಸಕೋಟೆ ವಿಜಯಕುಮಾರ್, ಕೆನ್ನಾಳುನಾಗರಾಜು, ಅಮೃತಿರಾಜಶೇಖರ್, ಕೆ.ಎಸ್.ಪ್ರಕಾಶ್, ವಕೀಲ ಮುರಳೀಧರ್

ರೋಗಿಗಳಿಗೆ ಹಣ್ಣು ವಿತರಣೆ: ಪುಟ್ಟಣ್ಣಯ್ಯ ಅವರ ಜನ್ಮದಿನದ ಅಂಗವಾಗಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ರೈತ ಸಂಘದಿಂದ ಹಣ್ಣುಹಂಪಲು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.