ಮಳವಳ್ಳಿ: ಯಾವುದೇ ಸಮುದಾಯವಾದರೂ ಅವರಲ್ಲಿ ಒಗ್ಗಟ್ಟಿದ್ದರೆ ಸಮಾಜದಲ್ಲಿ ಉತ್ತಮ ಕಾರ್ಯ ಮಾಡಬಹುದು ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಕನಕಪುರ ರಸ್ತೆಯ ಕೆ.ಎನ್.ನಾಗೇಗೌಡ ಬಡಾವಣೆಯಲ್ಲಿ ಪೇಟೆ ಒಕ್ಕಲಗೇರಿಯ ಶ್ರೀರಾಮ ಒಕ್ಕಲಿಗರ ಸೇವಾ ಸಂಘ ನಿರ್ಮಿಸಿರುವ ಪ್ರಸನ್ನ ಗಣಪತಿ ದೇವಸ್ಥಾನದ 48ನೇ ದಿನದ ಮಂಡಲ ಪೂಜಾ ಕಾರ್ಯಕ್ರಮದ ಅಂಗವಾಗಿ ನಡೆದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಈ ಭಾಗದ ಮುಖಂಡರು ಸಾಕಷ್ಟು ಶ್ರಮವಹಿಸಿ ನಿರ್ಮಿಸಿರುವ ಸಮುದಾಯ ಭವನ ಹಾಗೂ ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆ ಕಾಪಾಡುವುದರ ಜೊತೆಗೆ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಅಲ್ಲದೇ ಸ್ಥಳೀಯರಿಗೆ ಶುಭ ಸಮಾರಂಭಕ್ಕೆ ಕಡಿಮೆ ದರದಲ್ಲಿ ಬಾಡಿಗೆಗೆ ನೀಡಬೇಕು’ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಕೆ.ಅನ್ನದಾನಿ ಮಾತನಾಡಿ, ‘ಶ್ರೀರಾಮ ಒಕ್ಕಲಿಗರ ಸೇವಾ ಸಮಿತಿ ದಾನಿಗಳು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ಜನಪ್ರತಿನಿಧಿಗಳ ಅನುದಾನದಿಂದ ನಿರ್ಮಿಸಿರುವ ಬಡವರು ಹಾಗೂ ಮಧ್ಯಮವರ್ಗದ ಜನರಿಗೆ ನೆರವಾಗಲಿದೆ. ಸರ್.ಎಂ.ವಿಶ್ವೇಶ್ವರಯ್ಯ ಯುವಕ ಸಂಘದವರ ಸೇವೆ ಸಾಕಷ್ಟಿದೆ’ ಎಂದು ಹೇಳಿದರು.
ದೇವಸ್ಥಾನದ ನಿರ್ಮಾಣಕ್ಕೆ ನೆರವು ನೀಡಿದ ದಾನಿಗಳನ್ನು ಅಭಿನಂದಿಸಲಾಯಿತು. ಪುರಸಭೆ ಪುಟ್ಟಸ್ವಾಮಿ, ಉಪಾಧ್ಯಕ್ಷ ಎನ್.ಬಸವರಾಜು, ಸದಸ್ಯರಾದ ಟಿ.ನಂದಕುಮಾರ್, ಎಂ.ಟಿ.ಪ್ರಶಾಂತ್, ಎಂ.ಆರ್.ರಾಜಶೇಖರ್, ಸಿದ್ದರಾಜು, ಬಸವರಾಜು, ಮುಖಂಡರಾದ ಮರಿದೇವರು, ನಾಗರಾಜು, ಸಿದ್ದಲಿಂಗರಾಜು, ಸಫೀ, ಪುಟ್ಟರಾಜು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.