ADVERTISEMENT

ಮಂಡ್ಯ: ಹೂಳೆತ್ತಿದ್ದ ಕೆರೆಯಲ್ಲಿ ಜಲರಾಶಿ

ಗಂಜಿಗೆರೆಕೊಪ್ಪಲಿನ ದೇವಿಕೆರೆ; ಗ್ರಾಮಸ್ಥರಿಗೆ ಶ್ರಮಕ್ಕೆ ಪ್ರತಿಫಲ

ಬಲ್ಲೇನಹಳ್ಳಿ ಮಂಜುನಾಥ
Published 12 ಅಕ್ಟೋಬರ್ 2020, 19:30 IST
Last Updated 12 ಅಕ್ಟೋಬರ್ 2020, 19:30 IST
ಕೆ.ಆರ್.ಪೇಟೆ ತಾಲ್ಲೂಕಿನ ಗಂಜಿಗೆರೆಕೊಪ್ಪಲು ಗ್ರಾಮದ ದೇವಿಕೆರೆಯು ಭರ್ತಿಯಾಗಿರುವುದು
ಕೆ.ಆರ್.ಪೇಟೆ ತಾಲ್ಲೂಕಿನ ಗಂಜಿಗೆರೆಕೊಪ್ಪಲು ಗ್ರಾಮದ ದೇವಿಕೆರೆಯು ಭರ್ತಿಯಾಗಿರುವುದು   

ಕೆ.ಆರ್.ಪೇಟೆ: ಗ್ರಾಮೀಣ ಸಂಸ್ಕೃತಿಯ ಪ್ರತಿಬಿಂಬವಾದ ಕೆರೆ-ಕಟ್ಟೆಗಳನ್ನು ಉಳಿಸಿ–ಬೆಳಿಸಿ ಎಂದು ಘೋಷಣೆ ಕೂಗುವ ಈ ಕಾಲದಲ್ಲಿ ಅದನ್ನು ಮಾಡಿ ಸಾಧಿಸಿ ತೋರಿಸಿದ್ದಾರೆ ಈ ಗ್ರಾಮಸ್ಥರು. ತಾಲ್ಲೂಕಿನ ಗಂಜಿಗೆರೆಕೊಪ್ಪಲಿನ ದೇವಿಕೆರೆಯಲ್ಲಿ ಮಾರ್ಚ್ ತಿಂಗಳಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹೂಳೆತ್ತಲಾಗಿತ್ತು. ಈಗ ಆ ಕೆರೆ ಜಲರಾಶಿ ಮಿಂದಿದ್ದು, ಜನರಲ್ಲಿ ನವೋತ್ಸಾಹ ಮೂಡಿದೆ.

ಗಂಜಿಗೆರೆ ವ್ಯಾಪ್ತಿಯ ದೊಡ್ಡ ಕೆರೆಗಳಲ್ಲಿ ಒಂದಾದ ಈ ದೇವಿಕೆರೆಯು 29 ಎಕರೆ ವ್ಯಾಪ್ತಿಯನ್ನೊಳಗೊಂಡಿದ್ದು, ಹಿಂದೆಲ್ಲಾ ನೀರಿನಿಂದ ತುಂಬಿ ತುಳುಕುತ್ತಿತ್ತು. ಈಚಿನ ವರ್ಷಗಳಲ್ಲಿ ತುಂಬಿದ ಹೂಳು, ಹಳ್ಳಗಳು ಕಣ್ಮರೆಗಿ ಕೆರೆಯಲ್ಲಿ ನೀರಿರು
ವುದೇ ಅಪರೂಪವಾಗಿತ್ತು. ಕೆರೆ ಹೂಳೆತ್ತಿ ಅಭಿವೃದ್ಧಿಗೊಳಿಸಿ ಎಂದು ಜನರು ಕೇಳುತ್ತಿದ್ದರು. ಆದರೆ ಯಾರೂ ಸ್ಪಂದಿಸಿರಲಿಲ್ಲ.

ಬೇಸರಗೊಂಡಿದ್ದ ಗ್ರಾಮದ ಜನರ ನೆರವಿಗೆ ಬಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗಂಜಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣ್ಯರು ಹಾಗೂ ಜನಪ್ರತಿನಿಧಿಗಳ ನಾಯಕತ್ವದಲ್ಲಿ ‘ನಮ್ಮೂರು ನಮ್ಮಕೆರೆ’ ಸಮಿತಿಯನ್ನು ರಚಿಸಿ ಈ ಕಾಮಗಾರಿ ಕೈಗೊಂಡಿತ್ತು. ₹10 ಲಕ್ಷ ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ಧಿಗೊಳಿಸಲಾಗಿತ್ತು. ಗ್ರಾಮಸ್ಥರು, ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಪಾಲ್ಗೊಂಡು ಕೆಲಸ ಮಾಡಿದ್ದರು.

ADVERTISEMENT

ಆದರೆ ಮಾರ್ಚ್‌ನಿಂದಲೂ ಕೆರೆ ತುಂಬಿಸಬೇಕೆಂಬ ಪ್ರಯತ್ನ ನಡೆಯುತ್ತಿತ್ತು. ಈಗ ಹೇಮಾವತಿ ನಾಲೆಯ 64ನೇ ವಿತರಣಾ ಚಾನೆಲ್ ಮೂಲಕ ಒಂದು ವಾರ ಕೆರೆಗೆ ನೀರು ಹರಿಸಿ ತುಂಬಿಸಲಾಗಿದೆ. ಈ ಹೆಮ್ಮೆಯ ಕಾರ್ಯ ನಡೆಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಮುಂದಿನ ಶುಕ್ರವಾರ ಕೆರೆಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸುವ ಕಾರ್ಯಕ್ರಮ ಆಯೋಜಿಸಿದ್ದಾರೆ.

‘ಕೆರೆಗಳ ಹೂಳನ್ನು ತೆಗೆಸಿ ಕೆರೆಗಳ ಬಲವರ್ಧನೆ ಮಾಡುವುದರಿಂದ ರೈತರ ಬದುಕು ಹಸನಾಗುವದರೊಂದಿಗೆ ಅಂತ
ರ್ಜಲ ಮಟ್ಟವೂ ಹೆಚ್ಚಾಗುತ್ತದೆ. ಕೆರೆ ಅಭಿವೃದ್ಧಿಗೊಳ್ಳಬೇಕೆಂಬುದು ಬಹು
ದಿನದ ಬೇಡಿಕೆಯಾಗಿತ್ತು. ಇದೀಗ ಅದು ನನಸಾಗಿದೆ. ಕಡಿಮೆ ಖರ್ಚಿನಲ್ಲಿ ಇಡೀ ಕೆರೆಯ ಹೂಳೆತ್ತಿರುವುದರಿಂದ ಮೂರು-ನಾಲ್ಕು ಅಡಿ ನೀರು ನಿಲ್ಲಲಿದೆ. ಪ್ರಾಣಿ- ಪಕ್ಷಿಗಳಿಗೂ ಉಪಯುಕ್ತವಾಗಲಿದೆ’ ಎನ್ನುತ್ತಾರೆ ತಾಲ್ಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ.

‘ಹೂಳೆತ್ತಿಸುವುದರಿಂದ ಗಂಜಿಗೆರೆ, ಗಂಜಿಗೆರೆಕೊಪ್ಪಲು, ಮರಟಿಕೊಪ್ಪಲು, ಮಾವಿನಕೆರೆ, ರಾಜೇನಹಳ್ಳಿ, ಪೂವನ
ಹಳ್ಳಿ, ಬೂಕಹಳ್ಳಿ, ಬೂಕಹಳ್ಳಿ ಕೊಪ್ಪಲು, ಮುದಗೆರೆ, ಕುರುಬಹಳ್ಳಿ, ಸುತ್ತಮುತ್ತಲಿನ ಗ್ರಾಮದ ರೈತರಿಗೆ ಉಪಯುಕ್ತವಾಗಿದೆ. ಸರ್ಕಾರ ಕಾಮಗಾರಿ ಮಾಡಿಸಿದ್ದರೆ ಒಂದು ಕೋಟಿ ವೆಚ್ಚವಾಗುತಿತ್ತೋ ಏನೋ! ಗ್ರಾಮದವರೆಲ್ಲರೂ ಕೈಜೋಡಿಸಿದ್ದರಿಂದ ಹತ್ತೇ ಲಕ್ಷಕ್ಕೆ ಕೆರೆ ಹೂಳೆತ್ತಿಸಿದೆವು. ಕೆರೆ ತುಂಬಿರುವುದನ್ನು ಕಂಡು ಪಟ್ಟ ಶ್ರಮ ಸಾರ್ಥಕವಾಯಿತೆಂಬ ಖುಷಿ ಇದೆ’ ಎನ್ನುತ್ತಾರೆ ಕೆರೆ ಸಂರಕ್ಷಣಾ ಸಮಿತಿಯ ಅಧ್ಯಕ್ಷ ನಾಗೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.