ADVERTISEMENT

ಮಳವಳ್ಳಿ: ಬುಟ್ಟಿ ಹೆಣೆಯುವ ಮುತ್ತಮ್ಮಗೆ ಒಲಿದ ಅಧ್ಯಕ್ಷ ಸ್ಥಾನ‌

ಹಂದಿ ಮೇಯಿಸುವ, ಬುಟ್ಟಿ ಮಾಡುವ ಕಾಯಕ ಬಿಡದೆ ಇರಲು ನಿರ್ಧಾರ

ಟಿ.ಕೆ.ಲಿಂಗರಾಜು
Published 11 ಫೆಬ್ರುವರಿ 2021, 1:29 IST
Last Updated 11 ಫೆಬ್ರುವರಿ 2021, 1:29 IST
ಬಿದಿರಿನ ಬುಟ್ಟಿ ಹೆಣೆಯುತ್ತಿರುವ ಮುತ್ತಮ್ಮ ಈಗ ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ (ಎಡಚಿತ್ರ). ಮುತ್ತಮ್ಮ ಅವರನ್ನು ಕೆಪಿಸಿಸಿ ಸದಸ್ಯ ದಡದಪುರ ಶಿವಣ್ಣ ಅಭಿನಂದಿಸಿದರು
ಬಿದಿರಿನ ಬುಟ್ಟಿ ಹೆಣೆಯುತ್ತಿರುವ ಮುತ್ತಮ್ಮ ಈಗ ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ (ಎಡಚಿತ್ರ). ಮುತ್ತಮ್ಮ ಅವರನ್ನು ಕೆಪಿಸಿಸಿ ಸದಸ್ಯ ದಡದಪುರ ಶಿವಣ್ಣ ಅಭಿನಂದಿಸಿದರು   

ಮಳವಳ್ಳಿ: ತಾಲ್ಲೂಕಿನ ಬಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್ ಬೆಂಬಲಿತ ಸದಸ್ಯೆ, ಹಂದಿ ಮೇಯಿಸುವ ಮುತ್ತಮ್ಮ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು. ಮುತ್ತಮ್ಮ ಅನಕ್ಷರಸ್ಥರು. 30 ವರ್ಷಗಳಿಂದ ಹಂದಿ ಮೇಯಿಸುತ್ತಾ, ಬಿದಿರಿನ ಬುಟ್ಟಿ ಹೆಣೆದು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ.

ಕೊರಮ ಸಮಾಜದ ಮುತ್ತಮ್ಮ ಸ್ಪರ್ಧಿಸಿದ್ದ ವಾರ್ಡ್‌ನಲ್ಲಿ ಸುಮಾರು 500 ಮತದಾರರು ಇದ್ದು, ಕೊರಮ ಸಮುದಾಯದ 30 ಮಂದಿ ಮತದಾರರು ಇದ್ದಾರೆ. 2005ರಲ್ಲೂ ಅವರು ಪಂಚಾಯಿತಿ ಸದಸ್ಯೆಯಾಗಿದ್ದರು.

ADVERTISEMENT

ಈ ಬಾರಿ ಗೆದ್ದಿದ್ದ ಅವರನ್ನು ಶಿವಣ್ಣ ಅವರು ಅವಿರೋಧವಾಗಿ ಆಯ್ಕೆ ಮಾಡಲು ಮುಂದಾಗಿದ್ದರು. ಆದರೆ, ಕೆಲವು ಮುಖಂಡರು ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಿದರು. 13 ಸದಸ್ಯ ಬಲದ ಪಂಚಾಯಿತಿಯಲ್ಲಿ ಅಧ್ಯಕ್ಷರ ಚುನಾವಣೆಯಲ್ಲಿ ಮುತ್ತಮ್ಮ 9 ಮತ ಪಡೆದರು.

ಮುತ್ತಮ್ಮ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಬೀದಿಗೂ ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ದೀಪಗಳನ್ನು ಅಳವಡಿಸಲು ಕ್ರಮವಹಿಸಲಾಗುವುದು. ಸೂರಿಲ್ಲದ ಜನರಿಗೆ ಮನೆಯ ಸೌಲಭ್ಯ ಕಲ್ಪಿಸಲು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ಹೇಳಿದರು.

ದಡದಪುರ ಶಿವಣ್ಣ ಅವರ ಸಹಕಾರದಿಂದ ಸರ್ಕಾರದಿಂದ ಅನುದಾನ ತಂದು ಮಾದರಿ ಪಂಚಾಯಿತಿಯ ನಿರ್ಮಾಣ ಮಾಡಲಾಗುವುದು. ಅಧ್ಯಕ್ಷೆಯಾಗಿ ಸಾರ್ವಜನಿಕರ ಕೆಲಸದ ಜತೆಗೆ ಬೆಳಿಗ್ಗೆ ಹಂದಿ ಮೇಯಿಸಿ ನಂತರ ಪಂಚಾಯಿತಿ ಕರ್ತವ್ಯ ಮಾಡಿ, ಸಂಜೆ ಬುಟ್ಟಿ ಹೆಣೆಯುತ್ತೇನೆ ಎಂದರು.

ದಡದಪುರ ಶಿವಣ್ಣ ಮಾತನಾಡಿ, ಮುತ್ತಮ್ಮ ಅವರಿಗೆ ಅವರಿಗೆ ಅಧಿಕಾರ ಸಿಕ್ಕಿರುವುದು ಸಂತಸ ತಂದಿದೆ ಎಂದರು.

ಉಪಾಧ್ಯಕ್ಷ ರಮೇಶ್, ಚಿಕ್ಕಲಿಂಗಯ್ಯ, ದೇವರಾಜು, ಪ್ರಕಾಶ್ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.