ಮಂಡ್ಯ: ‘ವಿ.ಸಿ.ಫಾರಂನಲ್ಲಿ ಮಂಡ್ಯ ಕೃಷಿ ವಿಶ್ವವಿದ್ಯಾಲಯ ಮಾಡುತ್ತಿದ್ದಾರೆ. ಅದನ್ನು ಎಷ್ಟು ದಿನ ನಡೆಸುತ್ತಾರೋ ಗೊತ್ತಿಲ್ಲ. ಬೀದರ್ನಲ್ಲಿ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಮಾಡಿದ್ದರು, ಈಗ ಅದು ಮುಚ್ಚುವ ಸ್ಥಿತಿಯಲ್ಲಿದೆ. ಮಂಡ್ಯ ಜಿಲ್ಲೆಗೆ ನನ್ನ ಕೊಡುಗೆ ಏನೆಂದು ಕೇಳುವ ಕಾಂಗ್ರೆಸ್ ಕೊಡುಗೆ ಏನಿದೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕೆಎಸ್ಆರ್ಟಿಸಿ ಎದುರು ಆಟೋ ನಿಲ್ದಾಣಕ್ಕೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದವರು. ರಾಜ್ಯದಲ್ಲಿ ವಿವಿಗಳನ್ನು ಮುಚ್ಚುತ್ತಿರುವ ಸರ್ಕಾರ, ಅವುಗಳ ಅಭಿವೃದ್ಧಿಗೆ ಎಷ್ಟು ಹಣ ಕೊಟ್ಟಿದೆ. ಇವರು ಅಧಿಕಾರಕ್ಕೆ ಬಂದ ಮೇಲೆ ಎಷ್ಟು ವಿವಿಗಳನ್ನು ಮುಚ್ಚಿದ್ದಾರೆ ಎನ್ನುವುದು ಜನರಿಗೂ ಗೊತ್ತಿದೆ. ಬರೀ ಪ್ರಚಾರಕ್ಕೆ ಕೆಲಸ ಮಾಡಬಾರದು ತಿರುಗೇಟು ನೀಡಿದರು.
‘ರೋಡ್ ಟನೆಲ್ ಅನ್ನು ಬೆಂಗಳೂರಿಗಷ್ಟೇ ಅಲ್ಲ, ರಾಜ್ಯಕ್ಕೇ ಮಾಡಲಿ ನೋಡೋಣ. ಅವರು ಹೇಳುವ ಯಾವ ಮಾತೂ ಜಾರಿಯಾಗಲ್ಲ’ ಎಂದು ಕುಮಾರಸ್ವಾಮಿ ದೂರಿದರು.
2028ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವ ಬಗ್ಗೆ ಕನಸು ಕಾಣಬೇಕಷ್ಟೆ ಎಂದರು.
ಮಾಜಿ ಶಾಸಕ ಸುರೇಶ್ಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮುಖಂಡರಾದ ಬೇಲೂರು ಶಶಿಧರ, ನವೀನ್, ಆಟೋ ಚಾಲಕರ ಸಂಘದ ಕೃಷ್ಣ ಭಾಗವಹಿಸಿದ್ದರು.
‘₹14 ಸಾವಿರ ಕೋಟಿ ಲೂಟಿ’ ‘2027ಕ್ಕೆ ಎತ್ತಿನ ಹೊಳೆ ನೀರನ್ನು ಕೋಲಾರಕ್ಕೆ ತರುತ್ತೇವೆ ಎಂದಿದ್ದಾರೆ. ಕಾಡುಮನೆ ಎಸ್ಟೇಟ್ನಿಂದ ಮುಂದೆ ಎತ್ತಿನ ಹೊಳೆ ಯೋಜನೆ ಇನ್ನೂ ಬಂದಿಲ್ಲ. ಈಗಾಗಲೇ ₹14 ಸಾವಿರ ಕೋಟಿ ಲೂಟಿ ಆಗಿದೆ. 2013ರಲ್ಲಿ ಇದೇ ಸರ್ಕಾರ ಇದನ್ನು ಆರಂಭಿಸಿತ್ತು. ಎರಡೇ ವರ್ಷದಲ್ಲಿ ಚಿಕ್ಕಬಳ್ಳಾಪುರ ಕೋಲಾರಕ್ಕೆ ನೀರು ಕೊಡುತ್ತೇವೆ ಎಂದು ಹೇಳಿದರು. 2025 ಬಂದರೂ ನೀರು ಮಾತ್ರ ಬಂದಿಲ್ಲ’ ಎಂದು ಟೀಕಿಸಿದರು. ಎತ್ತಿನ ಹೊಳೆ ನೀರು ಕೊಡುತ್ತೇವೆ ಎಂದು ಬೆಂಗಳೂರು ಕೊಳಚೆ ನೀರು ಬಿಟ್ಟಿದ್ದಾರೆ. ಈಗ ಅವರು ಬೆಳೆಯೋ ತರಕಾರಿ ಯಾರೂ ಖರೀದಿಸದಂತೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.