ADVERTISEMENT

ಶ್ರೀರಂಗಪಟ್ಟಣ: ನದಿಗೆ ಹಾರಿದ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 3:14 IST
Last Updated 29 ನವೆಂಬರ್ 2021, 3:14 IST
ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ಮೈಸೂರಿನ ಗೋಕುಲಂನ ಮಧು ಅವರ ಪತ್ನಿ ರಕ್ಷಿತಾ ಎಂಬವರು ಭಾನುವಾರ ಕಾವೇರಿ ನದಿಗೆ ಹಾರಿದ್ದು, ಸ್ಥಳದಲ್ಲಿ ಜನರು ಗುಂಪುಗೂಡಿದ್ದರು
ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ಮೈಸೂರಿನ ಗೋಕುಲಂನ ಮಧು ಅವರ ಪತ್ನಿ ರಕ್ಷಿತಾ ಎಂಬವರು ಭಾನುವಾರ ಕಾವೇರಿ ನದಿಗೆ ಹಾರಿದ್ದು, ಸ್ಥಳದಲ್ಲಿ ಜನರು ಗುಂಪುಗೂಡಿದ್ದರು   

ಶ್ರೀರಂಗಪಟ್ಟಣ: ಮೈಸೂರಿನ ಗೋಕುಲಂ ಬಡಾವಣೆಯ ಮಹಿಳೆಯೊಬ್ಬರು ಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ಭಾನುವಾರ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗೋಕುಲಂನ ಮಧು ಅವರ ಪತ್ನಿ ರಕ್ಷಿತಾ (23) ಆತ್ಮಹತ್ಯೆ ಮಾಡಿಕೊಂಡಿದ್ದು, ಮಧ್ಯಾಹ್ನದ ವೇಳೆಗೆ ಈಜುಗಾರರರು ಶವವನ್ನು ಮೇಲೆ ತೆಗೆದರು. ತಾಲ್ಲೂಕಿನ ಮಲ್ಲೇಗೌಡನಕೊಪ್ಪಲು ಗ್ರಾಮದ ಮಹೇಶ್‌ ಎಂಬವರ ಪುತ್ರಿ ರಕ್ಷಿತಾ ಅವರನ್ನು ಎರಡು ವರ್ಷಗಳ ಹಿಂದೆ ಮೈಸೂರಿನ ಮಧು ಅವರಿಗೆ ಮದುವೆ ಮಾಡಿದ್ದು, ರಕ್ಷಿತಾ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

ಚಕಮಕಿ: ರಕ್ಷಿತಾ ಅವರ ಗಂಡನ ಮನೆಯವರು ಸರಿಯಾಗಿ ನೋಡಿಕೊಂಡಿಲ್ಲದ ಕಾರಣ ರಕ್ಷಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ರಕ್ಷಿತಾ ಗಂಡ ಮತ್ತು ಇತರರ ವಿರುದ್ಧ ಪೋಷಕರು ಹರಿಹಾಯ್ದರು.

ADVERTISEMENT

ಒಂದು ಹಂತದಲ್ಲಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಪಟ್ಟಣ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆ: ತಾಲ್ಲೂಕಿನ ರಾಂಪುರ ಗ್ರಾಮದ ಬಳಿ ಮೈಸೂರಿನ ವ್ಯಕ್ತಿಯೊಬ್ಬರು ಶನಿವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರಿನ ಗೋಕುಲಂ ನಿವಾಸಿ ಜವರಪ್ಪ ಅವರ ಮಗ ಜೆ.ಸತೀಶ್‌ (40) ಎಂಬವರು ಅನಿಲ್‌ಕುಮಾರ್‌ ಎಂಬವರ ಕೃಷಿ ಜಮೀನಿನಲ್ಲಿ ವಿಷ ಸೇವಿಸಿದ್ದಾರೆ. ಭಾನುವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶವ ಪತ್ತೆ: ತಾಲ್ಲೂಕಿನ ಮೇಳಾಪುರ ಸರಹದ್ದಿನ ಕಾವೇರಿ ನದಿಯಲ್ಲಿ ವ್ಯಕ್ತಿಯ ಶವ ಭಾನುವಾರ ಪತ್ತೆಯಾಗಿದೆ. ಇದು ಬೆಂಗಳೂರಿನ ಕಾವೇರಿ ನಗರದ ಶಿವಾ ನಂದ ಅವರ ಮಗ ಮಂಜುನಾಥ್‌ (30) ಅವರ ಶವ ಎಂದು ಗುರುತಿಸಲಾಗಿದೆ.

ಮೂರು ದಿನಗಳ ಹಿಂದೆ ಮಂಜುನಾಥ್‌ ಪಟ್ಟಣದ ಕಾವೇರಿ ಸಂಗಮದಲ್ಲಿ ಈಜಲು ನದಿಗೆ ಇಳಿದಾಗ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.