ಶ್ರೀರಂಗಪಟ್ಟಣ: ತಾಲ್ಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ವಿಜಯಲಕ್ಷ್ಮಿ ರಂಗನಾಥ್ ಎಂಬವರು ತಮಗೆ ಗೃಹಲಕ್ಷ್ಮಿ ಯೋಜನೆಯಿಂದ ಸಿಗುವ ಹಣಕ್ಕೆ ಸ್ವಂತ ಹಣವನ್ನೂ ಸೇರಿಸಿ ಸ್ವಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರಿನ ಟ್ಯಾಂಕ್ ಮತ್ತು ವಾಟರ್ ಫಿಲ್ಟರ್ ಕೊಡಿಸಿದ್ದಾರೆ.
ಗ್ರಾಮದ ಗುಂಜಾ ನರಸಿಂಹಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ರಂಗನಾಥ್ ಅವರ ಪತ್ನಿ ವಿಜಯಲಕ್ಷ್ಮಿ ತಮ್ಮ ಪತಿಯ ಸಲಹೆಯಂತೆ ಈಚೆಗೆ ರೂ.50 ಸಾವಿರ ಬೆಲೆಯ ವಾಟರ್ ಫಿಲ್ಟರ್ ಮತ್ತು ನೀರಿನ ಡ್ರಂ ಕೊಡಿಸಿದ್ದಾರೆ. ‘ಗೃಹಲಕ್ಷ್ಮಿ ಯೋಜನೆಯ ರೂ.30 ಸಾವಿರ ಮತ್ತು ನನ್ನ ಪಾಲಿನ ರೂ.20 ಸೇರಿಸಿ ಒಟ್ಟು ರೂ.50 ಸಾವಿರ ವೆಚ್ಚದಲ್ಲಿ ನಮ್ಮೂರಿನ ಸರ್ಕಾರಿ ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದೇನೆ. ಸರ್ಕಾರಿ ಶಾಲೆಯ ಮಕ್ಕಳು ಶುದ್ಧ ಕುಡಿಯುವ ನೀರು ಸಿಗಲಿ ಎಂಬ ಉದ್ದೇಶದಿಂದ ಅಳಿಲು ಸೇವೆ ಸಲ್ಲಿಸಿದ್ದೇನೆ ಎಂದು ವಿಜಯಲಕ್ಷ್ಮಿ ಹೇಳಿದರು.
‘ವಿಜಯಲಕ್ಷ್ಮಿ ರಂಗನಾಥ್ ಅವರು ನಮ್ಮ ಶಾಲೆಗೆ 500ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ಮತ್ತು ಪ್ರತಿ ಗಂಟೆಗೆ 100ಲೀಟರ್ ನೀರು ಶುದ್ಧೀಕರಣ ಮಾಡಬಲ್ಲ ಗುಣಮಟ್ಟದ ವಾಟರ್ ಫಿಲ್ಟರ್ ಕೊಡಿಸಿದ್ದಾರೆ. ಇದರಿಂದಾಗಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶುದ್ಧ ನೀರು ಕುಡಿಯುತ್ತಿದ್ದೇವೆ’ ಎಂದು ಶಾಲೆಯ ಶಿಕ್ಷಕ ಜಿ. ಸೀತಾರಾಮು ಸಂತಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.