
ಶ್ರೀರಂಗಪಟ್ಟಣ: ‘ಅಂಗವಿಕಲರು ಕೀಳರಿಮೆ ಬಿಟ್ಟು ಸಿಗುವ ಅವಕಾಶಗಳನ್ನು ಬಳಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು’ ಎಂದು ಎಲ್ಲರೊಳಗೊಂದಾಗು ಟ್ರಸ್ಟ್ ಅಧ್ಯಕ್ಷ ವಿನಯ್ಕುಮಾರ್ ಸಲಹೆ ನೀಡಿದರು.
ತಾಲ್ಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಕಾವೇರಿ ತೀರದ ವಿಶೇಷ ಚೇತನರ ಟ್ರಸ್ಟ್ ಸೋಮವಾರ ಏರ್ಪಡಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಅಂಗವಿಕಲರಿಗೆ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು.
‘ಅಂಗವೈಕಲ್ಯ ಶಾಪ ಎಂಬ ತಪ್ಪು ಅಭಿಪ್ರಾಯ ಸಲ್ಲದು. ದೈಹಿಕ ಅಂಗವಿಕಲತೆ ಉಳ್ಳುವರು ಮಹತ್ತರ ಸಾಧನೆ ಮಾಡಿರುವ ಸಾಕಷ್ಟು ನಿದರ್ಶನಗಳು ಇವೆ. ಅಂತಹ ಮಾದರಿ ವ್ಯಕ್ತಿಗಳನ್ನು ಸ್ಫೂರ್ತಿಯಾಗಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಗ್ರಾಮಗಳ 80 ಮಂದಿ ಅಂಗವಿಕಲರಿಗೆ ಆಹಾರದ ಕಿಟ್ ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಲಿಂಗಣ್ಣ, ಟ್ರಸ್ಟ್ ಅಧ್ಯಕ್ಷ ಮೀಸೆ ನಾಗಣ್ಣ, ಕಾರ್ಯದರ್ಶಿ ಗೋವಿಂದ, ಖಜಾಂಚಿ ಮರಳಾಗಾಲ ಮಂಜುನಾಥ್, ಸಾಹಿತಿ ಕೊತ್ತತ್ತಿ ರಾಜು, ಸೌಹಾರ್ದ ಸಹಕಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ. ಗುರುರಾಜ್, ಕೆ.ಟಿ. ರಂಗಯ್ಯ, ವೀಣಾ ಶಂಕರ್, ಗಾಯತ್ರಿ, ಗಂಜಾಂ ರಾಮು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.