ADVERTISEMENT

ತರಕಾರಿ ದರ ಇಳಿಮುಖ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 21:30 IST
Last Updated 29 ಸೆಪ್ಟೆಂಬರ್ 2020, 21:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಾರುಕಟ್ಟೆಗಳಲ್ಲಿ ಮೂರು ದಿನಗಳಿಂದ ತರಕಾರಿ ದರಗಳು ದಿಢೀರ್ ಕುಸಿತ ಕಂಡಿವೆ. ಬಂದ್ ಇದ್ದ ಕಾರಣಕ್ಕೆ ವ್ಯಾಪಾರ ನಡೆಯುವ ಅನುಮಾನದಿಂದ ಮಾರುಕಟ್ಟೆಗಳಲ್ಲಿ ಬೇಡಿಕೆ ಕಡಿಮೆಯಾಗಿತ್ತು. ಈ ವಾರದಲ್ಲಿ ತರಕಾರಿ ದರ ಮತ್ತೆ ಏರುವ ನಿರೀಕ್ಷೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಕಳೆದ ವಾರ ಬೀನ್ಸ್, ಕ್ಯಾರೆಟ್ ದರ ₹100ಕ್ಕೆ ಏರಿತ್ತು. ಈಗ ಬೀನ್ಸ್ ಪ್ರತಿ ಕೆ.ಜಿ.ಗೆ ₹60 ಹಾಗೂ ಕ್ಯಾರೆಟ್ ₹80ರಂತೆ ಸಗಟು ಮಾರುಕಟ್ಟೆಗಳಲ್ಲಿ ಮಂಗಳವಾರ ಮಾರಾಟವಾಯಿತು.

ಬೆಂಡೆಕಾಯಿ ದರ ತುಸು ಏರಿದೆ. ಈರುಳ್ಳಿ, ಟೊಮೆಟೊ, ಬದನೆ, ಮೆಣಸಿನಕಾಯಿ, ಹೂಕೋಸು, ಮೂಲಂಗಿ ಬೆಲೆ ಸ್ಥಿರವಾಗಿದ್ದು, ಸೊಪ್ಪಿನ ದರಗಳಲ್ಲೂ ಯಾವುದೇ ವ್ಯತ್ಯಾಸವಿಲ್ಲ.

ADVERTISEMENT

'ಮಾರುಕಟ್ಟೆಗಳಿಗೆ ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಆವಕವಾದರೂ ಕಳೆದ ಶುಕ್ರವಾರ ಹಾಗೂ ಸೋಮವಾರ ರಾಜ್ಯದಲ್ಲಿ ಬಂದ್ ಇದ್ದ ಕಾರಣಕ್ಕೆತರಕಾರಿಗಳಿಗೆ ಬೇಡಿಕೆ ಕಡಿಮೆ ಇತ್ತು. ವ್ಯಾಪಾರಿಗಳು ಬಂದ್ ಇದ್ದರೆ ವ್ಯಾಪಾರ ನಡೆಯುತ್ತದೋ ಇಲ್ಲವೋ ಎಂಬ ಗೊಂದಲದಲ್ಲಿ ಹೆಚ್ಚಾಗಿ ತರಕಾರಿ ಖರೀದಿಸಲಿಲ್ಲ. ಇದರಿಂದ ಬೆಲೆಗಳು ಕಡಿಮೆಯಾಗಿದೆ' ಎಂದು ದಾಸನಪುರ ಎಪಿಎಂಸಿ ಪ್ರಾಂಗಣದ ತರಕಾರಿ ವ್ಯಾಪಾರಿಯೊಬ್ಬರು ತಿಳಿಸಿದರು.

'ಕೊರೊನಾ ಸೋಂಕಿನ ಪರಿಸ್ಥಿತಿಯು ಕೊಂಚ ನಿಯಂತ್ರಣಕ್ಕೆ ಬಂದಿರುವುದರಿಂದ ಶುಭ ಸಮಾರಂಭಗಳು ಹೆಚ್ಚಾಗಿ ನಡೆಯುವ ಸಂಭವವಿದೆ. ಆಗ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಈ ವಾರದಿಂದಲೇ ತರಕಾರಿ ದರಗಳು ಮತ್ತೆ ಏರುವ ನಿರೀಕ್ಷೆ ಇದೆ' ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.