ಬೆಂಗಳೂರು: ‘ಸಂಚಾರ ನಿಯಮ ಪಾಲಿಸಿ’ ಎಂದು ನಗರದ ಶ್ವಾನದಳದ ಕಾನ್ಸ್ಟೆಬಲ್ ಹಾಡಿರುವ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನರ ಮನ ಗೆದ್ದಿದೆ.
ಗಾಯಕನೂ ಆಗಿರುವ ಕಾನ್ಸ್ಟೆಬಲ್ ಮೌಲಾಲಿ ಕೆ. ಆಲಗೂರ್, ಸಂಚಾರಿ ನಿಯಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಾಡಿದ ಹಾಡು ಇದೀಗ ವೈರಲ್ ಆಗಿದೆ. ಈ ಹಾಡಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ, ಸಂಚಾರ ನಿಯಮ ಉಲ್ಲಂಘಿಸಿದವರಿಗೆ ವಿಧಿಸುವ ದಂಡ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ನಿಯಮ ಉಲ್ಲಂಘಿಸಿದ ಕಾರಣಕ್ಕೆ ಈಗಾಗಲೇ ಅನೇಕ ವಾಹನ ಸವಾರರು ಭಾರಿ ದಂಡ ಪಾವತಿಸಿ ಹೈರಾಣಾಗಿದ್ದಾರೆ.
ಸಂಚಾರ ನಿಯಮಗಳಿಗೆ ಹಾಡಿನ ಲೇಪ ನೀಡಿದರೆ ಜನರ ಮನಮುಟ್ಟಬಹುದೆಂದು ಯೋಚಿಸಿದ ಮೌಲಾಲಿ, ಸ್ವತಃ ಹಾಡು ರಚಿಸಿ ಹಾಡಿದ್ದಾರೆ. ಈ ಹಾಡನ್ನು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ.ಡಿ. ಚನ್ನಣ್ಣನವರ್ ಫ್ಯಾನ್ ಫೇಜ್ನಲ್ಲಿ ಹಂಚಿಕೊಂಡಿದ್ದು, ಆ ಮೂಲಕ 20 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿದೆ. ಮೌಲಾಲಿ ಅವರು ಅನೇಕ ಹಾಡುಗಳನ್ನು ರಿಮೇಕ್ ಮಾಡಿಯೂ ಹಾಡುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.