ADVERTISEMENT

ಅಂಬೇಡ್ಕರ್ ಭವನದಲ್ಲಿ ವಿವಾಹ: ಅವಕಾಶ ನೀಡುವಂತೆ ಶಾಸಕರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 8:43 IST
Last Updated 7 ಸೆಪ್ಟೆಂಬರ್ 2013, 8:43 IST

ಹುಣಸೂರು: ತಾಲ್ಲೂಕಿನ ಅಂಬೇಡ್ಕರ್ ಭವನವನ್ನು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ವಿವಾಹ ನಡೆಸಲು ಅನುಕೂಲ ಕಲ್ಪಸಿಕೊಡಬೇಕು ಎಂದು ಎಸ್.ಸಿ ಮತ್ತು ಎಸ್.ಟಿ. ಸಭೆಯಲ್ಲಿ ನಾಗರಿಕರು ಶಾಸಕರನ್ನು ಒತ್ತಾಯಿಸಿದರು.

ಇದಕ್ಕೆ ಶಾಸಕ ಎಚ್.ಪಿ. ಮಂಜುನಾಥ್ ಉತ್ತರಿಸಿ, ಅಂಬೇಡ್ಕರ್ ಭವನದಲ್ಲಿ ವಿವಾಹ ನಡೆಸುವುದು ಶೋಭೆ ತರುವುದಿಲ್ಲ. ಬದಲಿಗೆ ವಿಚಾರ ಸಂಕಿರಣ ನಡೆಸಲು ಅಥವಾ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಸಲು ಕಟ್ಟಡ ಸೂಕ್ತವಾಗಿದೆ ಎಂದರು.

ವಿವಾಹಗಳನ್ನು ನಡೆಸಲು ಅನುಕೂಲವಾಗುವಂತೆ ಎಚ್.ಡಿ. ಕೋಟೆ ವೃತ್ತದ ಬಳಿ ಈಗಾಗಲೇ ನಿರ್ಮಿಸಿರುವ ಜಗಜೀವನರಾಂ ಭವನದಲ್ಲಿ ನಡೆಸಲು ಯಾವುದೇ ತೊಂದರೆ ಇಲ್ಲ ಎಂದು ಸಭೆಗೆ ತಿಳಿಸಿದರು.

ಪಟ್ಟಣದ ಕೆಲವು ವೃತ್ತಗಳು ಸೇರಿದಂತೆ ರಸ್ತೆಗಳಿಗೆ ಅಂಬೇಡ್ಕರ್ ಹೆಸರು ಹಾಗೂ ಪ್ರತಿಮೆ ಅನಾವರಣ ಮಾಡುವಂತೆ ಮುಖಂಡ ನಿಂಗರಾಜ್ ಮಲ್ಲಾಡಿ ಒತ್ತಾಯಿಸಿದರು. ಶಾಸಕರು ಉತ್ತರಿಸಿ ಪುರಸಭೆ ವ್ಯಾಪ್ತಿಯಲ್ಲಿ ಯಾವುದೇ ಕೆಲಸ ತೆಗೆದುಕೊಳ್ಳಬೇಕಿದ್ದರೂ ಪುರಸಭೆಯಲ್ಲಿ  ಚರ್ಚೆ ನಂತರ ಜಿಲ್ಲಾಧಿಕಾರಿ ಅನುಮತಿ ಪಡೆದು ಜಾರಿಗೆ ತರಬೇಕು. ಈ ಹಿಂದೆ ಪುರಸಭೆ ತೆಗೆದುಕೊಂಡ ಅನೇಕ ನಿರ್ಣಯಗಳು ಈಗಲೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇದೆ ಎಂದರು.

ಸ್ಮಶಾನಕ್ಕೆ ಒತ್ತು: ತಾಲ್ಲೂಕಿನ 30 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಲಿತರಿಗೆ ಸೇರಿದ ಸ್ಮಶಾನ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಈಗಾಗಲೇ ನಡೆದಿದ್ದು, ತಿಂಗಳಿಗೆ 4ರಿಂದ 5 ಗ್ರಾ.ಪಂ ವ್ಯಾಪ್ತಿಯ ಸ್ಮಶಾನ ಸರ್ವೆ ನಡೆಸಿ ತೆರವುಗೊಳಿಸುವ ಕೆಲಸ ಸಾಗಿದೆ ಎಂದರು.

ಕೆಜೆಪಿಯ ಎಸ್.ಸಿ. ಮತ್ತು ಎಸ್.ಟಿ. ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ್ ಮಲ್ಲಾಡಿ ಮಾತನಾಡಿ, ತಾಲ್ಲೂಕಿನ ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ಕೆಲವು ಮುಖಂಡರಿಂದ ಕೇಳಿ ತಿಳಿಯುವ ಬದಲು ಕ್ಷೇತ್ರದ 30 ಗ್ರಾ. ಪಂಗಳ ಹಿಂದುಳಿದ ವರ್ಗಗಳ ಜನಪ್ರತಿನಿಧಿಗಳ ಸಭೆ ಕರೆದು ಸ್ಥಳೀಯ ಮಟ್ಟದಲ್ಲಿ ನಿಜವಾಗಿ ಇರುವ ಸಮಸ್ಯೆ ಕೇಳಿ ಪರಿಹಾರ ಕಂಡು ಹಿಡಿಯುವುದರಿಂದ ಸಮಸ್ಯೆಗಳಿಗೆ  ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖಂಡರಾದ ಡಿ.ಕುಮಾರ್, ಕೆಂಪರಾಜು, ಕಾಂತತಾಜು, ದೇವರಾಜ್, ಕಿರಂಗೂರು ಸ್ವಾಮಿ, ಪುಟ್ಟಸ್ವಾಮಿ, ಪ್ರಸನ್ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.