ADVERTISEMENT

ಅಕ್ರಮ ಕಟ್ಟಡ ನೆಲಸಮ: ಭೂಮಿ ವಶ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 9:00 IST
Last Updated 11 ಜನವರಿ 2012, 9:00 IST

ಎಚ್.ಡಿ.ಕೋಟೆ: ತಾಲ್ಲೂಕಿನ ಹಾಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗಡಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳು ಮತ್ತು ಪ್ರಭಾವಿಗಳು ಆಕ್ರಮಿಸಿಕೊಂಡಿದ್ದ 14 ನಿವೇಶನ ಗಳನ್ನು ತಾಲ್ಲೂಕು ಆಡಳಿತ ಮತ್ತು ಪ್ರಭಾರ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಮಂಗಳವಾರ ನೆಲಸಮಗೊಳಿಸಿ ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಯಿತು.

ಗಂಗಡಹಳ್ಳಿ ಗ್ರಾಮದ ಸರ್ವೆ ನಂ.1ರಲ್ಲಿ ಸರ್ಕಾರಕ್ಕೆ ಸೇರಿದ 4.16ಎಕರೆ ಜಾಗದಲ್ಲಿ 30ಗುಂಟೆ ರಾಷ್ಟ್ರೀಯ ಹೆದ್ದಾರಿಗೂ ಉಳಿದ 3.26 ಎಕರೆ ಜಾಗವನ್ನು 1958ರಲ್ಲಿ ಗ್ರಾ.ಪಂಗೆ ನಿವೇಶನಕ್ಕಾಗಿ ನೀಡಲಾಗಿತ್ತು.
ಆದರೆ, 3.26 ಎಕರೆ ಜಾಗದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಮಾಜಿ ಕೆ.ವಿ. ಬಸವರಾಜು ಮತ್ತು ಮಾದೇಗೌಡ ದನದ ಕೊಟ್ಟಿಗೆಯನ್ನು ಅಕ್ರಮವಾಗಿ ನಿರ್ಮಿಸಿಕೊಂಡಿದ್ದರು.

ಎರಡು ವಾಣಿಜ್ಯ ಮಳಿಗೆಯನ್ನು ರಾಮೇಗೌಡ ಮತ್ತು 1 ವಾಣಿಜ್ಯ ಮಳಿಗೆಯನ್ನು ಗೋವಿಂದೇಗೌಡ ಹಾಗೂ ಉಳಿಕೆ 15 ನಿವೇಶನಗಳನ್ನು ಪ್ರಭಾವಿ ವ್ಯಕ್ತಿಗಳು ಬೇಲಿ ಹಾಕಿಕೊಂಡು ಖಾತೆ ಮಾಡುವಂತೆ ಗ್ರಾಮ ಪಂಚಾಯಿತಿಯಲ್ಲಿ ಒತ್ತಾಯಿಸುತ್ತಿದ್ದರು.

ಬಾಗಲಕೋಟೆಯಿಂದ ಬಿಳಿಗಿರಿ ರಂಗನಬೆಟ್ಟದ ವರೆಗೆ ರಾಷ್ಟ್ರೀಯ ಹೆದ್ದಾರಿ ಬರುವುದ ರಿಂದ ಗ್ರಾಮದ ಶಾಲೆಯನ್ನು ಸ್ಥಳಾಂತರಿಸಬೇಕಿದ್ದು ಅದಕ್ಕಾಗಿ ಶಾಲೆಗೆ ಈ ನಿವೇಶನವನ್ನು ನೀಡಬೇಕೆಂದು ಗ್ರಾಮ ಪಂಚಾ ಯಿತಿಗೆ ಕಳೆದ ಜೂನ್ ತಿಂಗಳಲ್ಲಿ ತಿಳಿಸಲಾಗಿತ್ತು. ಈ ಸಂಬಂಧ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿವೇಶನದಾರರಿಗೆ ಕೂಡಲೇ ಖಾಲಿ ಮಾಡುವಂತೆ ತಿಳಿಸಿ ನೋಟಿಸ್ ನೀಡಲಾಗಿತ್ತು.

ಗ್ರಾಮ ಪಂಚಾಯಿತಿ ನೀಡಿರುವ ನೋಟಿಸ್‌ನ್ನು ಪ್ರಶ್ನಿಸಿ ಉಚ್ಚನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು. ನಂತರ ನ್ಯಾಯಾಲಯಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ 2011ರ ಅಕ್ಟೋಬರ್‌ನಲ್ಲಿ ತಡೆಯಾಜ್ಞೆ ವಜಾ ಆಗಿತ್ತು.

ಈ ಸಂಬಂಧ ತಹಸೀಲ್ದಾರ್ ಮತ್ತು ತಾಲ್ಲೂಕು ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿಯಿಂದ ಪತ್ರ ಬರೆಯಲಾಗಿತ್ತು.ಹುಣಸೂರು ಪ್ರೊಬೇಷನರಿ ಉಪವಿಭಾಗಾಧಿಕಾರಿ ಪುಷ್ಪಲತಾ, ತಹಶೀಲ್ದಾರ್ ಎನ್.ಸಿ. ಜಗದೀಶ್, ಇಓ ಕೃಷ್ಣರಾಜು, ಪಿಡಿಓ ಶ್ರೀಧರ್, ಕಾರ್ಯದರ್ಶಿ ಚಿನ್ನಸ್ವಾಮಿ ಇದ್ದರು.

ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಪರಾಧ ವಿಭಾಗದ ಆರಕ್ಷಕ ಉಪನಿರೀಕ್ಷಕ ತಿಪ್ಪೇಗೌಡ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.