ADVERTISEMENT

ಅನಾಥವಾಗಿ ನಿಂತಿದ್ದ ಬಾಲಕಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 4:18 IST
Last Updated 17 ಡಿಸೆಂಬರ್ 2013, 4:18 IST

ಮೈಸೂರು: ನಗರದ ಗ್ರಾಮಾಂತರ ಬಸ್‌ ನಿಲ್ದಾಣದ ಬಳಿ ಅಳುತ್ತಾ ನಿಂತಿದ್ದ 10 ವರ್ಷದ ಬಾಲಕಿಯನ್ನು ಮಕ್ಕಳ ಸಹಾಯವಾಣಿ ಸಂಸ್ಥೆಯವರು ಸೋಮವಾರ ರಕ್ಷಿಸಿದ್ದಾರೆ.

ಕೊಡಗು ಜಿಲ್ಲೆ, ಕುಶಾಲನಗರ ತಾಲ್ಲೂಕಿನ ತೊರೆನೂರು ಗ್ರಾಮದ ಯಮುನಾ ಗ್ರಾಮಾಂತರ ಬಸ್‌ ನಿಲ್ದಾಣದ ಬಳಿ ಬೆಳಿಗ್ಗೆ 10 ಗಂಟೆ ಸುಮಾರಿನಲ್ಲಿ ಅನಾಥವಾಗಿ ನಿಂತಿದ್ದಳು. ಇದನ್ನು ಗಮನಿಸಿದ ಮಕ್ಕಳ ಸಹಾಯವಾಣಿ ಸಂಸ್ಥೆಯ ದಾಕ್ಷಾಯಣಿ ಕೂಡಲೇ ಆ ಬಾಲಕಿಯನ್ನು ಸಮಾಧಾನ ಮಾಡಿ ಮಕ್ಕಳ ಸಹಾಯವಾಣಿ ಸಂಸ್ಥೆಗೆ
ಕರೆದೊಯ್ದರು.

ಬಾಲಕಿಯನ್ನು ಕೌನ್ಸೆಲಿಂಗ್
ಮಾಡಲಾಗಿ ‘ನನ್ನ ತಾಯಿ ಬಳ್ಳಾರಿಗೆ ಕರೆದೊಯ್ದು ಬಿಟ್ಟಳು. ಅಲ್ಲಿಂದ ರೈಲು ಹತ್ತಿ ಮೈಸೂರಿಗೆ ಬಂದೆ. ಹೊಟ್ಟೆ ಹಸಿವು ತಾಳಲಾರದೆ ನಗರದಲ್ಲಿ ಸುತ್ತುತ್ತಿದ್ದೆ’ ಎಂಬುದಾಗಿ ಬಾಲಕಿ ತಿಳಿಸಿದ್ದಾಳೆ ಎಂದು ಮಕ್ಕಳ ಸಹಾಯವಾಣಿ ಸಂಸ್ಥೆಯ ಸಮನ್ವಯಾಧಿಕಾರಿ ಅನಿಲ್‌ಕುಮಾರ್‌ ತಿಳಿಸಿದರು.

‘ಬಾಲಕಿಯನ್ನು ಸಂಸ್ಥೆಯ ತಾತ್ಕಾಲಿಕ ಮಕ್ಕಳ ತಂಗುದಾಣದಲ್ಲಿ ಇರಿಸಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ ಮಂಗಳವಾರ ಮುಂದೆ ಹಾಜರುಪಡಿಸಲಾಗುವುದು. ನಂತರ ಆಕೆಯ ಪೋಷಕರನ್ನು ಕರೆಸುವ ವ್ಯವಸ್ಥೆ ಮಾಡಲಾಗುವುದು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.