ಮೈಸೂರು: ‘ಒಕಿ’ ಚಂಡಮಾರುತದ ಪ್ರಭಾವದಿಂದ ಸಾಂಸ್ಕೃತಿಕ ನಗರಿಯಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಶನಿವಾರವೂ ಮುಂದುವರಿಯಿತು. ಶನಿವಾರ ನಸುಕಿನಲ್ಲಿ ಆರಂಭವಾದ ಮಳೆಯು ಬೆಳಗಿನವರೆಗೂ ಸೋನೆಯಂತೆ ಸುರಿಯಿತು.
ಬೆಳಿಗ್ಗೆ 8 ಗಂಟೆಯ ಸುಮಾರಿಗೆ ವರುಣನ ಸಿಂಚನ ಬಿರುಸುಗೊಂಡಿತು. ವಾಯು ವಿಹಾರಕ್ಕೆ ತೆರಳಿದವರು ಮಳೆಗೆ ಸಿಲುಕಿದರು. ವಾಹನ ಸವಾರರು ಸುರಿಯುತ್ತಿದ್ದ ಮಳೆಯಲ್ಲಿಯೇ ಸಂಚರಿಸಿದರು. ವರುಣನಿಂದ ರಕ್ಷಣೆ ಪಡೆಯಲು ಪಾದಚಾರಿಗಳು ಛತ್ರಿಯ ಮೊರೆ ಹೋಗಿದ್ದರು.
ಮಧ್ಯಾಹ್ನದ ಬಳಿಕ ವರುಣ ಧರೆಯತ್ತ ಮುಖ ಮಾಡದಿದ್ದರೂ ಮೋಡ ಮುಸುಕಿದ ವಾತಾವರಣವಿತ್ತು. ಜೋರಾಗಿ ಬೀಸುವ ಗಾಳಿಯಿಂದ ಚಳಿಯೂ ಹೆಚ್ಚಾಗಿತ್ತು. ಭಾನುವಾರವೂ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಸುರಿಯುತ್ತಿರುವ ತುಂತುರು ಮಳೆ ರೈತರಲ್ಲಿ ಆತಂಕ ಮೂಡಿಸಿದೆ. ರಾಗಿ, ಭತ್ತ ಕೊಯ್ಲು ಸಾಧ್ಯವಾಗದೆ ಆತಂಕಕ್ಕೆ ಒಳಾಗಿದ್ದಾರೆ. ಅಲಸಂದೆ, ಅವರೆ ಸೇರಿ ಇತರೆ ಬೆಳೆಗಳ ಒಕ್ಕಣೆಯಲ್ಲಿದ್ದ ರೈತರು ಪರದಾಡುವಂತಾಗಿದೆ. ರಾವಂದೂರು ಹೋಬಳಿಯಲ್ಲಿ 13 ಮಿ.ಮೀ, ಬೆಟ್ಟದಪುರದಲ್ಲಿ 9 ಮಿ.ಮೀ, ಹಾರನಹಳ್ಳಿಯಲ್ಲಿ 8 ಮಿ.ಮೀ, ಕಸಬಾ ಹೋಬಳಿಯಲ್ಲಿ 8 ಮಿ.ಮೀ ಮಳೆಯಾಗಿದೆ.
ಕೇರಳದಲ್ಲಿ ಮಳೆಯಾಗುತ್ತಿರುವ ಪರಿಣಾಮ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದ ಒಳಹರಿವು 200 ಕ್ಯೂಸೆಕ್ನಿಂದ 489 ಕ್ಯೂಸೆಕ್ಗೇರಿದೆ. ತಾಲ್ಲೂಕಿನಲ್ಲಿ ಶನಿವಾರವೂ ತುಂತುರು ಮಳೆ ಮುಂದುವರಿಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.