ಮೈಸೂರು: ದಸರಾ ಗಾಳಿಪಟ ಸ್ಪರ್ಧೆ ಉಪ ಸಮಿತಿ ವತಿಯಿಂದ ಅ.21 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಗರದ ಲಲಿತಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ನಡೆಯಲಿದೆ.
`ಅ.20 ರಂದು ಮಧ್ಯಾಹ್ನ 3.30 ಕ್ಕೆ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಮಿತಾ ಪ್ರಸಾದ್ ಗಾಳಿಪಟ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಅ.21 ರಂದು ಸ್ಪರ್ಧೆ ನಡೆಯಲಿದ್ದು, ಗುಜರಾತ್, ಮುಂಬೈ ಇತರೆ ರಾಜ್ಯಗಳಿಂದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಗಾಳಿಪಟ ಸ್ಪರ್ಧೆಯ ತೀರ್ಪುಗಾರರಾದ ದಿಗಂತ್ ಜೋಶಿ, ಅಶೋಕ, ವಿ.ಕೆ.ರಾವ್, ಗೋವಿಂದಯ್ಯ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಕೆಲಸ ನಿರ್ವಹಿಸಲಿದ್ದಾರೆ~ ಎಂದು ದಸರಾ ಗಾಳಿಪಟ ಸ್ಪರ್ಧೆ ಉಪ ಸಮಿತಿ ಕಾರ್ಯಾಧ್ಯಕ್ಷ ಎಸ್.ನಾಗರಾಜಪ್ಪ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
`ಸ್ಪರ್ಧೆಯಲ್ಲಿ ಭಾಗವಹಿಸುವವರು ಒಂದು ಗಂಟೆ ಮೊದಲು ಸ್ಥಳದಲ್ಲೇ ಅರ್ಜಿ ಪಡೆದು ಭರ್ತಿ ಮಾಡಿ ಹೆಸರು ನೋಂದಣಿ ಮಾಡಿಸಬೇಕು. ಸ್ಪರ್ಧೆಗೆ ಪ್ರವೇಶ ಉಚಿತ. ಗಾಳಿಪಟದ ವೈವಿಧ್ಯತೆ, ಹಾರಾಟದ ಎತ್ತರ, ಸಂದೇಶ, ಪರಿಣತಿ ಮತ್ತು ಕೌಶಲ್ಯಗಳನ್ನು ಪರಿಗಣಿಸಿ ಅಂಕಗಳನ್ನು ನೀಡಲಾಗುವುದು. 12 ವರ್ಷದ ಒಳಪಟ್ಟು, 12-23 ವರ್ಷ, 23 ವರ್ಷ ಮೇಲ್ಪಟ್ಟು ಮತ್ತು ಸಾಮೂಹಿಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಪ್ರತಿಯೊಂದು ವಿಭಾಗಕ್ಕೂ ಮೂರು ನಗದು ಬಹುಮಾನ ಮತ್ತು ಸಮಾಧಾನಕರ ಬಹುಮಾನ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರಿಗೆ ನೀಡಲಾಗುವುದು. ಸಾಮೂಹಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದವರಿಗೆ ವಿಶೇಷ ದಸರಾ ಕಪ್ ನೀಡಲಾಗುವುದು. ತೀರ್ಪುಗಾರರ ತೀರ್ಮಾನವೇ ಅಂತಿಮ~ ಎಂದು ತಿಳಿಸಿದರು.
`ಸ್ಪರ್ಧೆ ನಡೆಯುವ ಸ್ಥಳದಲ್ಲಿ ಮೈಸೂರು ಕೈಟ್ ಕ್ಲಬ್ ಸೇರಿದಂತೆ ವಿವಿಧ ಸಂಸ್ಥೆಗಳು ಮಳಿಗೆಗಳನ್ನು ಹಾಕಲಿದ್ದಾರೆ. ಗಾಳಿಪಟ ಹಬ್ಬದಲ್ಲಿ ಸಾರ್ವಜನಿಕರು, ಶಾಲಾ-ಕಾಲೇಜು ಮತ್ತು ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ ಭಾಗವಹಿಸುವಂತೆ ಉತ್ತೇಜನ ನೀಡಲು ಮುಖ್ಯ ಸ್ಪರ್ಧೆ ನಡೆಯುವವರೆಗೂ ವಿವಿಧ ಬಡಾವಣೆಗಳಲ್ಲಿ ಗಾಳಿಪಟ ಹಾರಾಟ ನಡೆಸುವ ಮೂಲಕ ಎಲ್ಲರ ಗಮನ ಸೆಳೆಯಲಾಗುವುದು~ ಎಂದು ತಿಳಿಸಿದರು.
ದಸರಾ ಉಪ ವಿಶೇಷಾಧಿಕಾರಿ ಡಾ.ವೈ.ಮಂಜುನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.