ADVERTISEMENT

ಆಗಸ್ಟ್ 20ರಂದು ಅರಸು ಪುತ್ಥಳಿ ಅನಾವರಣ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2011, 8:40 IST
Last Updated 2 ಆಗಸ್ಟ್ 2011, 8:40 IST
ಆಗಸ್ಟ್ 20ರಂದು ಅರಸು ಪುತ್ಥಳಿ ಅನಾವರಣ
ಆಗಸ್ಟ್ 20ರಂದು ಅರಸು ಪುತ್ಥಳಿ ಅನಾವರಣ   

ಹುಣಸೂರು: ಪಟ್ಟಣದಲ್ಲಿ ದಿ. ದೇವರಾಜಅರಸು ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಆಗಸ್ಟ್ 20ರಂದು ನಡೆಸಲು ಶಾಸಕ ಎಚ್.ಪಿ. ಮಂಜುನಾಥ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸರ್ಕಾರದಿಂದ ಅನುಮೋದನೆ ದೊರಕಿ 9 ವರ್ಷದ ಬಳಿಕ ಪುತ್ಥಳಿ ಅನಾವರಣ ಭಾಗ್ಯ ಕೂಡಿ ಬಂದಿದೆ ಎಂದರು.

ಅರಸು ಪುತ್ಥಳಿ ಅನಾವರಣ ಸರ್ಕಾರಿ ಕಾರ್ಯಕ್ರಮವಾಗಿದ್ದರೂ, ಊರ ಹಬ್ಬವಾಗಿ ಮೂರೂ ಪಕ್ಷದ ಮುಖಂಡರು ಸೇರಿ ಆಚರಿಸಲು ಮುಂದಾಗಿರುವುದು ವಿಶೇಷವಾಗಿದೆ.

ಪ್ರತಿಯೊಂದು ಪಕ್ಷದ ಕಾರ್ಯಕರ್ತರು, ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಅರಿವು ಮೂಡಿಸಿ ಸ್ವಯಂ ಪ್ರೇರಿತರಾಗಿ ಭಾಗವಹಿಸಲು ಸೂಚನೆ ನೀಡಬೇಕು ಎಂದು ತೀರ್ಮಾನಿಸಲಾಯಿತು.

ನಾಮರಕಣ: ಕೃಷಿ ಉತ್ಪನ್ನ ಮಾರುಕಟ್ಟೆ ವೃತ್ತದಿಂದ ಹಂಚಿನ ಕಾರ್ಖಾನೆ ಕೂಡು ರಸ್ತೆಯವರೆಗಿನ ಬಿ.ಎಂ. ರಸ್ತೆಯನ್ನು ದೇವರಾಜಅರಸು ರಸ್ತೆ ಎಂದು ನಾಮಕರಣ ಮಾಡಲು ತೀರ್ಮಾನಿಸಲಾಯಿತು. ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಚದುರಂಗ ಭವನವನ್ನು ಆಗಸ್ಟ್ 20ರಂದೇ ಉದ್ಘಾಟಿಸುವ ಬಗ್ಗೆ ಪ್ರಸ್ತಾಪಿಸಲಾಯಿತು.

ಗಣ್ಯರ ಆಹ್ವಾನ: ಅರಸು ಕುಟುಂಬ ಸದಸ್ಯರು ಹಾಗೂ ಅವರ ಕಾಲದಲ್ಲಿ ಒಡನಾಡಿಯಾಗಿದ್ದ ರಾಜಕೀಯ ಮುಖಂಡರು, ಉಳುವವನೆ ಭೂಒಡೆಯ ಸಮಿತಿಯ ಅಂದಿನ ಅಧ್ಯಕ್ಷ ಸುಬ್ಬಯ್ಯ ಶೆಟ್ಟರು, ಪತ್ರಕರ್ತ ಸುಬ್ಬರಾವ್ ಸೇರಿದಂತೆ ಸಂಸದರು, ವಿವಿಧ ಪ್ರಕ್ಷದ ಮುಖಂಡರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು.

ವಿಧಾನಪರಿಷತ್ ಸದಸ್ಯ ಎಸ್. ಚಿಕ್ಕಮಾದು ಮಾತನಾಡಿ, ಮಾಜಿ ಮುಖ್ಯಮಂತ್ರಿ ಪುತ್ಥಳಿ ಅನಾವರಣಕ್ಕೆ ರಾಜ್ಯದ ಮುಖ್ಯಮಂತ್ರಿ ಆಹ್ವಾನಿ ಸುವುದು ಸೂಕ್ತ. ಕಾರ್ಯಕ್ರಮಕ್ಕೆ ತಗಲಿರುವ ಖರ್ಚುಗಳನ್ನು ಮೂರು ಪಕ್ಷದ ಮುಖಂಡರು ಭರಿಸಲಿದ್ದು, ಚಂದಾ ವಸೂಲಿ ಸಂಪೂರ್ಣವಾಗಿ ನಿಷೇಧಿಸಿದೆ. ಸಾರ್ವಜನಿಕರು ದೇಣಿಗೆ ನೀಡಬೇಕಿದ್ದರೆ ಸ್ವಾಗತ ಸಮಿತಿ ಅಧ್ಯಕ್ಷರನ್ನು ನೇರವಾಗಿ ಸಂಪರ್ಕಿಸಿ ಎಂದರು.

ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ಸದಾನಂದ, ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ಪುಟ್ಟಮಾದಯ್ಯ, ಜೆಡಿಎಸ್. ಅಧ್ಯಕ್ಷ ಲಾರಿ ಸ್ವಾಮಿಗೌಡ, ಹುಣಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಮಾರಸ್ವಾಮಿ, ಬಿಳಿಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ಹಾಜರಿದ್ದರು. ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಪಾಪಣ್ಣ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.