ADVERTISEMENT

ಆಟೋ ನಗರಕ್ಕೆ ಶೀಘ್ರ ಚಾಲನೆ: ರಾಮದಾಸ್

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 7:15 IST
Last Updated 20 ಫೆಬ್ರುವರಿ 2012, 7:15 IST

ಮೈಸೂರು: ನಗರ ಹೊರ ವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆಟೋ ನಗರಕ್ಕೆ ಶೀಘ್ರದಲ್ಲೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ತಿಳಿಸಿದರು.

ನಗರದ ಕೆಆರ್‌ಎಸ್ ರಸ್ತೆಯಲ್ಲಿರುವ ರೋಟರಿ ಶಾಲೆಯಲ್ಲಿ ಭಾನುವಾರ ನಡೆದ ಆಟೋಮೊಬೈಲ್ಸ್ ಮತ್ತು ಮೋಟಾರ್ ಲೂಬ್ರಿಕೆಂಟ್ಸ್ ಡೀಲರ್ಸ್‌ ಅಸೋಸಿಯೇಷನ್ ಉದ್ಘಾಟನೆ ಹಾಗೂ `ಮೈಸೂರು ಮಿರರ್~ ಪತ್ರಿಕೆಯ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಗರದ ಮಧ್ಯಭಾಗದಲ್ಲಿರುವ ಗ್ಯಾರೇಜ್‌ಗಳನ್ನು ಹೊರವಲಯದಲ್ಲಿ ನಿರ್ಮಾಣವಾಗುವ ಆಟೋ ನಗರಕ್ಕೆ ಸ್ಥಳಾಂತರಿಸಲಾಗುವುದು. ಈಗಾಗಲೇ ನಂಜನಗೂಡು ರಸ್ತೆಯಲ್ಲಿರುವ ಟ್ರಕ್ ಟರ್ಮಿನಲ್ ಎದುರಿನ ಜಾಗವನ್ನು ಆಟೋ ನಗರಕ್ಕಾಗಿ ಗುರುತಿಸಲಾಗಿದೆ. ಉಳಿದ ಮೂರು ಭಾಗಗಳಲ್ಲಿ ಜಾಗ ಗುರುತಿಸಿ ನಗರದ ನಾಲ್ಕು ದಿಕ್ಕುಗಳಲ್ಲೂ ಆಟೋ ನಗರ ನಿರ್ಮಿಸಲಾಗುವುದು. ಅಲ್ಲಿ ಗ್ಯಾರೇಜ್ ತೆರೆಯಲು ಸರ್ಕಾರ ಕೂಡ ಸಹಾಯ ಧನ ನೀಡಲಿದೆ. ವಾಹನ ರಿಪೇರಿಗೆ `108~ ಮಾದರಿಯ ಸೇವೆಯನ್ನು ನೀಡುವ ಚಿಂತನೆ ಇದೆ.

ಇದು ಜಾರಿಗೆ ಬಂದರೆ ಸ್ಥಳಕ್ಕೆ ತೆರಳಿ ವಾಹನ ರಿಪೇರಿ ಮಾಡಲಾಗುವುದು ಎಂದರು.
ಗ್ಯಾರೇಜ್‌ಗಳಲ್ಲಿರುವ ಬಹುಪಾಲು ಕಾರ್ಮಿಕರು ಬಡವರು. ಪ್ರತಿದಿನ ಪೆಟ್ರೋಲ್, ಗ್ರೀಸ್‌ನೊಂದಿಗೆ ಕೆಲಸ ಮಾಡುವುದರಿಂದ ಅವರ ಆರೋಗ್ಯ ಹದಗೆ ಡುವ ಸಂಭವ ಹೆಚ್ಚು. ಇದನ್ನು ಮನಗಂಡು ಗ್ಯಾರೇಜ್ ಕಾರ್ಮಿಕರಿಗೆ ಆರೋಗ್ಯ ವಿಮೆ ಮಾಡಿಸುವ ಆಲೋಚನೆ ಇದೆ.

ದಶಕದ ಹಿಂದೆ ಭೂಗತ ಲೋಕದ ಪಾತಕಿಗಳು ಲೂಬ್ರಿಕೆಂಟ್ಸ್ ಡೀಲರ್ಸ್‌ಗಳಾಗಿದ್ದರು. ಕದ್ದ ಮಾಲುಗಳನ್ನು ಮಾರುವ ದಂಧೆ ನಡೆಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಆಟೋ ಮೊಬೈಲ್ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಸಂಘಟಿತ ಪ್ರಯತ್ನದ ಮೂಲಕ ಪರಿಹಾರ ಕಂಡುಕೊಳ್ಳೋಣ ಎಂದರು.

ಮೈಸೂರು ಜಿಲ್ಲೆಯಲ್ಲಿ ಶೀಘ್ರದಲ್ಲೆ `ಸರ್ಕಾರಿ ಸವಲತ್ತುಗಳ ಸಂತೆ~ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗುವುದು. ವಿಧವಾ ವೇತನ ಸೇರಿದಂತೆ ಅನೇಕ ಸರ್ಕಾರಿ ಸವಲತ್ತುಗಳನ್ನು ಫಲಾನುಭವಿಗಳಿಗೆ  ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ವಿತರಿಸಲಿದ್ದಾರೆ. ಸಾರ್ವಜನಿಕರ ಹಿತಾಸಕ್ತಿ ಕಾಪಾ ಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಇಳೈ ಆಳ್ವಾರ್ ಸ್ವಾಮೀಜಿ, ರಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೇಯರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ರವೀಂದ್ರ ಭಟ್ ಮಾತನಾಡಿದರು. ಸಂಘದ ಅಧ್ಯಕ್ಷ ಎಸ್.ಶ್ರೀನಿವಾಸ್, ಉಪಾಧ್ಯಕ್ಷ ಎನ್.ಮದನ್‌ಲಾಲ್, ಪ್ರಧಾನ ಕಾರ್ಯದರ್ಶಿ ಮನೋಹರ್‌ಲಾಲ್ ಜೈನ್, ಖಜಾಂಚಿ ಬಿ.ಎಲ್.ಅಶೋಕ್‌ಕುಮಾರ್, ಸುನಿಲ್ ಮೋದಿ, ಆರ್.ರಘು ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.