ಮೈಸೂರು: ‘ಕುವೆಂಪು ಅವರ ಎಲ್ಲ ಕೃತಿಗಳಲ್ಲಿ ಆತ್ಮನಿರೀಕ್ಷಾ ಗುಣ ಇದೆ. ಈ ಕಾರಣಕ್ಕಾಗಿಯೇ ಆ ಕಾಲಮಾನದ ಎಲ್ಲ ಬರಹಗಾರರಿಗಿಂತ ಅವರು ಹೆಚ್ಚು ಆಪ್ತವಾಗುತ್ತಾರೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಶುಕ್ರವಾರ ಏರ್ಪ ಡಿಸಿದ್ದ ‘ಬಹು ಭಾಷೆಗಳಲ್ಲಿ ಕುವೆಂಪು’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕನ್ನಡದ ಮನಸ್ಸುಗಳಿಗೆ ಕುವೆಂಪು ಇತ್ತೀಚೆಗೆ ಚೆನ್ನಾಗಿ ಅರ್ಥವಾಗುತ್ತಿದ್ದಾರೆ. ಅವರನ್ನು ಓದುವವರು ಹೆಚ್ಚುತ್ತಿದ್ದಾರೆ. ಸ್ವಜಾತಿ ನಿಷ್ಠುರ ವಿಮರ್ಶೆ ಹೇಗಿದೆ? ತಾಯಿ ಅಂತಃಕರಣದಿಂದ ಮಹಿಳೆಯ ಸಂಕಟ ಮೊದಲಾದ ವಿಷಯಗಳನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಅವರ ಬರಹಗಳು ಆ ಕಾಲಮಾನದ ಘಟನೆಗಳ ಸಾಕ್ಷಿಪ್ರಜ್ಞೆಗಳಾಗಿವೆ’ ಎಂದರು.
‘ಕುವೆಂಪು ಕೃತಿಗಳನ್ನು 13 ಭಾಷೆಗಳಿಗೆ ಅನುವಾದಿಸಿ ಹೊರ ರಾಜ್ಯಗಳು ಮತ್ತು ಹೊರ ದೇಶದವರಿಗೆ ತಲುಪಿಸುತ್ತಿರುವುದು ಸ್ತುತ್ಯಾರ್ಹ. ಸಂಸ್ಕೃತಿ ಮತ್ತು ಜ್ಞಾನ ವಿಸ್ತರಣೆ ಕಾಯಕ ವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿ ಕಾರ ಮಾಡುತ್ತಿದೆ’ ಎಂದು ಶ್ಲಾಘಿಸಿದರು.
ಸಾಹಿತಿ ಗಣೇಶ್ ಎನ್.ದೇವಿ ಮಾತನಾಡಿ, ಕುವೆಂಪು ಅವರೇ ಒಂದು ಮಹಾಕಾವ್ಯ. ಅವರು ಎಲ್ಲರಿಗೂ ಸ್ಫೂರ್ತಿ ಯಾಗಿದ್ದಾರೆ. ಅನುವಾದವು ಸಾಹಿತ್ಯಕ್ಕೆ ಜೀವಂತಿಕೆಯನ್ನು ಮರಳಿಸು ತ್ತದೆ. ಭಾಷಾ ಭಾರತಿಯ ಈ ಕಾರ್ಯದಿಂದ ಕುವೆಂಪು ಕೃತಿಗಳು ಇತರ ಭಾಷೆಗಳ ಜನರನ್ನು ತಲುಪುತ್ತಿವೆ ಎಂದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಕೆ.ವಿ.ನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿ, ಕುವೆಂಪು ಅವರ ಐದು ಸಾಂಸ್ಕೃತಿಕ ಕೃತಿಗಳನ್ನು 13 ಭಾಷೆಗಳಿಗೆ ಅನುವಾದ ಮಾಡ ಲಾಗಿದೆ. ‘ಬಹುಭಾಷಾ ಭಾರತಿಗೆ ಐಕ್ಯ ತೆಯ ಆರತಿ’ ಶೀರ್ಷಿಕೆಯಡಿ ಈ ಪುಸ್ತ ಕಗಳನ್ನು ಪ್ರಕಟಿಸಲಾಗಿದೆ ಎಂದರು.
ತಾರಿಣಿ ಚಿದಾನಂದಗೌಡ, ರಂಗಾ ಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ ಇದ್ದರು. ಕುವೆಂಪು ಫೆಲೋಷಿಪ್ ಪಡೆದ ಆರ್.ಚಲಪತಿ ಅವರ ‘ಕುವೆಂಪು ಬರೆಹಗಳ ಓದಿನ ರಾಜಕಾರಣ’ ಹಾಗೂ ಉತ್ಥಾನ ಭಾರೀಘಾಟ್ ರಚಿಸಿರುವ ‘ಕುವೆಂಪು ನಾಟಕಗಳು ಮುಂದಿಡುವ ರಂಗಕಲ್ಪನೆ’ ಕೃತಿಗಳು ಬಿಡುಗಡೆಗೊಂಡವು.
ಬಿಡುಗಡೆಯಾದ ಅನುವಾದ ಕೃತಿಗಳು
ಬಹುಜಿಹ್ವಾ ಭಾರತಿ ಕಿ ಐಕ್ಯಾತಾ ಹಾರತಿ, ಕುವೆಂಪು ಸಂಚಯಂ – ತೆಲುಗು
ಪನ್ಮೊಳಿ ಕಲೈ ಮಗಳಕ್ಕೂ ಒಟ್ರುಮೈಯಿನ್ ವಳಿಪ್ಪಾಡು, ಕುವೆಂಪು ವಾಸಿಪ್ಪು– ತಮಿಳು
ಬಹುಭಾಷಾ ಭಾರತಿಕ್ಕ್ ಐಕ್ಯತಿಂತೆ ದೀಪಾರಾಧನೆ, ಕುವೆಂಪು ಸಂಚಯಂ– ಮಲಯಾಳಂ
ಬಹುಜಿಹ್ವಾ ಭಾರತಿಕ್ ಐಕ್ಯತಾಚ್ಯ ಆರತಿ– ಕೊಂಕಣಿ
ಬಹುಭಾಷಾ ಭಾರತೀಸ್ ಏಕಾತೇಚಿ ಆರತಿ– ಮರಾಠಿ
ಬಹುಭಾಷೀ ಭಾರತೀನೆ ಏಕ್ತಾನ್ರೀ ಆರ್ತೀ– ಗುಜರಾತಿ
ಬಹುಬೋಲಿ ಭಾರತ್ ದಿ ಏಕತಾದೆ ಲೆಯಿ ಆರತಿ– ಪಂಜಾಬಿ
ಬಹುತ್ ಜಿಬಕ್ ಭಾರತೀಕ್ ಐಕ್ಯತಾರ್ ಪೂಜಾ– ಅಸ್ಸಾಮಿ
ಬಹುಜಿಹ್ವಾ ಜಿಬಕ್ ಭಾರತೀಕು ಏಕತಾರಾ ಆರತಿ– ಒರಿಯಾ
ಹಮಾ ಲಿಸಾನಿ ಭಾರತ್ ಕಿ ಎಕ್ ಜಹತಿ ಕೆ ಲಿಯೆ ಸಖಾಫತ್ ಪೆರ್ ಪಾಂಚ್ ಬಸೀರತ್ ಅಪ್ರೋಜ್ ದುಆರಿಯಾ ಖುತ್ಖಾತ್– ಉರ್ದು
ಬಹುಭಾಷಾದಿಗಂತೇತರ್ ಭಾರತ್ ಐಕ್ಯ್ ಸಾಧನ್– ಬಂಗಾಳಿ
ಬಹು ಜಿಹ್ವಾ ಭಾರತೀಕೋ ಏಕ್ ತಾಕಿ ಆರತಿ, ಕುವೆಂಪು ಸಂಚಯ 1 ಮತ್ತು 2– ಹಿಂದಿ
ವರ್ಷಿಪ್ ಆಫ್ ಯೂನಿಟಿ ಫಾರ್ ಮಲ್ಟಿಲಿಂಗ್ವೆಲ್ ಇಂಡಿಯಾ, ಕುವೆಂಪು ರೀಡರ್, ಕಲೆಕ್ಟೆಡ್ ಶಾರ್ಟ್ ಸ್ಟೋರೀಸ್ ಆಫ್ ಕುವೆಂಪು– ಇಂಗ್ಲಿಷ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.