ಮೈಸೂರು: ನಗರದ 32ನೇ ವಾರ್ಡಿನ ಉಪ ಚುನಾವಣೆಯಲ್ಲಿ ಭಾನುವಾರ ನೀರಸ ಮತದಾನ ನಡೆದಿದೆ. 10,258 ಮತದಾರರ ಪೈಕಿ 4,799 ಮಂದಿ ಮಾತ್ರ ತಮ್ಮ ಹಕ್ಕು (ಶೇ 47.99) ಚಲಾಯಿಸಿದ್ದಾರೆ. ಭಾನುವಾರ ರಜಾ ದಿನ ಇದ್ದಾಗ್ಯೂ ಮತದಾರರು ಮತಗಟ್ಟೆಗೆ ಬರುವ ಉತ್ಸಾಹ ತೋರಿಲ್ಲ.
ಬೆಳಿಗ್ಗೆ 7 ಗಂಟೆಯಿಂದಲೇ ವಾರ್ಡಿನ 12 ಮತಗಟ್ಟೆಗಳಲ್ಲಿ ಮತದಾನ ಆರಂಭವಾಯಿತು. ಆದರೆ, ಮಧ್ಯಾಹ್ನ 12ರವರೆಗೂ ತೀರಾ ನೀರಸವಾಗಿತ್ತು. ಬೆರಳೆಣಿಕೆಯಷ್ಟು ಮಂದಿ ಮಾತ್ರ ಮತಗಟ್ಟೆಗೆ ಬಂದರು. ಬಂದವರ ಪೈಕಿ ಬಹಳಷ್ಟು ಮಂದಿಗೆ ಹೆಸರು ಮತದಾರರ ಪಟ್ಟಿಯಲ್ಲಿ ನಾಪತ್ತೆಯಾಗಿರುವುದು ಗೊಂದಲಕ್ಕೆ ಎಡೆಮಾಡಿತು. ಮಧ್ಯಾಹ್ನದ ನಂತರ ಮತದಾನ ಚುರುಕುಗೊಂಡಿತು. ಕೆಲವು ಮತಗಟ್ಟೆಗಳಲ್ಲಿ ಸರತಿ ಸಾಲುಗಳು ಕಂಡು ಬಂದವು.
5,080 ಪುರುಷ ಮತದಾರರ ಪೈಕಿ 2,459 ಮಂದಿ ಮತ ಚಲಾಯಿಸಿದರು. ಒಟ್ಟು ಶೇ 48.41ರಷ್ಟು ಪ್ರಮಾಣ ದಾಖಲಾಗಿದೆ. 5,178 ಮಹಿಳಾ ಮತದಾರರ ಪೈಕಿ 2,464 ಮಂದಿ ಮಾತ್ರ ಮತದಾನ ಮಾಡಿದ್ದಾರೆ. ಇವರ ಶೇಕಡಾವಾರು ಪ್ರಮಾಣ 47.59.
ಎಲ್ಲೆಡೆ ಬಿಗಿಭದ್ರತೆ ಕಲ್ಪಿಸಲಾಗಿತ್ತು. ಕೆಲವು ಸೂಕ್ಷ್ಮ ಮತಗಟ್ಟೆಗಳ ಮುಂದೆ ವಾಹನ ಸಂಚಾರವನ್ನು ನಿರ್ಬಂಧಿಸ ಲಾಗಿತ್ತು. ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.
ಮಾತಿನ ಚಕಮಕಿ: ಪಡುವಾರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮತ ಗಟ್ಟೆಯ ಬಳಿ ಬಿಜೆಪಿಯವರು ಹಣ ಹಂಚುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಘೋಷಣೆ ಗಳನ್ನು ಕೂಗಿದರು.
ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಮೇಲೆ ಪ್ರತ್ಯಾರೋಪ ಮಾಡಿದರು. ಇದರಿಂದ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ಉದ್ವಿಗ್ನಗೊಂಡಿತು. ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕಾಂಗ್ರೆಸ್ನಿಂದ ಬಿ.ಕೆ.ಪ್ರಕಾಶ್, ಜೆಡಿಎಸ್ನಿಂದ ಎಸ್ಬಿಎಂ ಮಂಜು, ಬಿಜೆಪಿಯಿಂದ ಕೆ.ಮಾದೇಶ್ ಸ್ಪರ್ಧಾ ಕಣದಲ್ಲಿದ್ದಾರೆ. ಜುಲೈ 5ರಂದು ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ಮತ ಎಣಿಕೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.