ADVERTISEMENT

ಕಲಾಸಕ್ತರಿಗೆ ಕಚಗುಳಿಯಿಟ್ಟ ಕಲಾಕೃತಿಗಳು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 10:25 IST
Last Updated 21 ಅಕ್ಟೋಬರ್ 2012, 10:25 IST

ಮೈಸೂರು: ಹಳೆಯ ಕನ್ನಡಕದೊಳಗಿಂದ ಇಣುಕಿ ನೋಡುತ್ತಿದ್ದ ಇಲಿ, ಅಪ್ಪನ ಬೂಟುಗಳನ್ನು ತೊಟ್ಟ ಪುಟ್ಟ ಬಾಲಕಿಯ ಮುಗುಳ್ನಗೆಯ ಛಾಯಾಚಿತ್ರ, ವಿವಿಧ ನಮೂನೆಯ ಮರದ ಕಲಾಕೃತಿಗಳು, ಶಿಲ್ಪಕಲೆಗಳು ಸೇರಿದಂತೆ ನೂರಾರು ಕಲಾಕೃತಿಗಳು ಕಲಾಸಕ್ತರನ್ನು ಮೋಡಿ ಮಾಡಿದವು.

ನಗರದ ಸಯ್ಯಾಜಿರಾವ್ ರಸ್ತೆಯ ಚಾಮರಾ ಜೇಂದ್ರ ತಾಂತ್ರಿಕ ಸಂಸ್ಥೆಯಲ್ಲಿ ದಸರಾ ಕಲಾ ಮೇಳ ಉಪ ಸಮಿತಿ ಶನಿವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಕಲಾ ಪ್ರದರ್ಶನದಲ್ಲಿ ಕಂಡುಬಂದ ದೃಶ್ಯಗಳು.
ಚಿತ್ರಕಲೆ, ಗ್ರಾಫಿಕ್ಸ್ ಕಲೆ, ಶಿಲ್ಪಕಲೆ, ಅನ್ವಯಕಲೆ, ಛಾಯಾಚಿತ್ರಕಲೆ ವಿಭಾಗಗಳಲ್ಲಿ ಪ್ರತ್ಯೇಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧ ಕಲಾಶಾಲೆಗಳ ವಿದ್ಯಾರ್ಥಿಗಳ ಕಲಾಕೃತಿಗಳು, ವೃತ್ತಿಪರ ಮತ್ತು ಹವ್ಯಾಸಿ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಶಿಲ್ಪಕಲಾ ವಿಭಾಗದಲ್ಲಿ ಕವಡೆ, ಹಲ್ಲಿ, ಹೆಣ್ಣಿನ ಆಕೃತಿಗಳು ಗಮನ ಸೆಳೆದವು. ಚಿತ್ರಕಲಾ ವಿಭಾಗದಲ್ಲಿ ಒಂದಕ್ಕಿಂದ ಒಂದು ಚಿತ್ರಕಲೆಗಳು ಭಿನ್ನವಾಗಿದ್ದವು. ಕಲಾವಿದನ ಕುಸುರಿಗೆ ಕಲಾಕೃತಿಗಳು ಕನ್ನಡಿ ಹಿಡಿದಂತಿತ್ತು. ಕಲೆಯಲ್ಲಿ ಕಲಾವಿದನ ನೈಪುಣ್ಯತೆ ಎದ್ದು ಕಾಣುತ್ತಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಕಲಾ ಮೇಳ ಉದ್ಘಾಟಿಸಿದರು. ಪಾಲಿಕೆ ಆಯುಕ್ತ ಡಾ.ಎಂ.ಆರ್.ರವಿ, ಕಾವಾ ಡೀನ್ ಹಾಗೂ ಕಲಾ ಮೇಳ ಕಾರ್ಯಾಧ್ಯಕ್ಷ ವಿ.ಎ.ದೇಶಪಾಂಡೆ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.