ಮೈಸೂರು: ನಗರದ ದೇಜಗೌ ಟ್ರಸ್ಟ್ ನೀಡುವ 2012 ನೇ ಸಾಲಿನ `ವಿಶ್ವಮಾನವ ಪ್ರಶಸ್ತಿ'ಗೆ ಹಿರಿಯ ಸಾಹಿತಿಗಳಾದ ಡಾ.ಕೆ.ಭೈರವಮೂರ್ತಿ ಮತ್ತು ಡಾ.ಮ.ಗು.ಬಿರಾದಾರ ಆಯ್ಕೆಯಾಗಿದ್ದು, ಇವರಿಗೆ 25 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ನೀಡಲಾಗುವುದು.
2012 ನೇ ಸಾಲಿನ `ಶ್ರೀಮತಿ ಸಾವಿತ್ರಮ್ಮ ದೇಜಗೌ' ಪ್ರಶಸ್ತಿಯನ್ನು ಡಾ.ಕೆ.ಆರ್.ಸಂಧ್ಯಾರೆಡ್ಡಿ ಮತ್ತು ಡಾ. ವಿಜಯಮಾಲ ರಂಗನಾಥ್ ಅವರಿಗೆ ನೀಡಲಾಗುತ್ತಿದ್ದು, ಈ ಪ್ರಶಸ್ತಿಯು 20 ಸಾವಿರ ರೂಪಾಯಿ ನಗದು ಮತ್ತು ಫಲಕವನ್ನು ಒಳಗೊಂಡಿದೆ.
ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ವತಿಯಿಂದ ನೀಡುವ `ದಿವಂಗತ ಎಚ್.ಕೆ.ವೀರಣ್ಣಗೌಡ' ಪತ್ರಿಕೋದ್ಯಮ ಪ್ರಶಸ್ತಿಯನ್ನು ಕನ್ನಡಪ್ರಭ ಪತ್ರಿಕೆಯ ಮೈಸೂರು ವಿಭಾಗದ ಮುಖ್ಯಸ್ಥ ಅಂಶಿ ಪ್ರಸನ್ನಕುಮಾರ್ ಅವರಿಗೆ ನೀಡಲಾಗುವುದು. ಈ ಪ್ರಶಸ್ತಿ15 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಡಿ.30ರಂದು ನಗರದಲ್ಲಿ ನಡೆಯಲಿರುವ ಕುವೆಂಪು ಜನ್ಮೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಕಾರ್ಯದರ್ಶಿ ಶಿವಸುಂದರ ಸತ್ಯೇಂದ್ರ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.