ಮೈಸೂರು: ಈ ವರ್ಷ ರಾಜ್ಯವು ಬರಗಾಲ ಎದುರಿಸಿರಬಹುದು. ಆದರೆ, ರೈತರ ಉತ್ಸಾಹಕ್ಕೆ ಕೊರತೆಯೇ ಇಲ್ಲ. ಅದರಲ್ಲೂ ಗ್ರಾಮೀಣ ಕ್ರೀಡೆಗಳೆಂದರೆ ಸಾಕು ತಮ್ಮ ಭುಜಬಲ ಪರಾಕ್ರಮ ಮೆರೆಯಲು ಸಿದ್ಧರಾಗುವ ಮಣ್ಣಿನ ಮಕ್ಕಳು ಶುಕ್ರವಾರ ರೈತ ದಸರಾದಲ್ಲಿ ಬೆರಗಿನ ಲೋಕವನ್ನೇ ಸೃಷ್ಟಿಸಿಬಿಟ್ಟರು.
ಬೆನ್ನಿನ ಮೇಲೆ 50 ಕೆಜಿ ತೂಕದ ಚೀಲ ಇಟ್ಟು ಕೊಂಡು ಕುದುರೆಯಂತೆ ಓಡಿ ಪ್ರಥಮ ಸ್ಥಾನ ಗಳಿಸಿದ ತಿ.ನರಸೀಪುರದ ಮನೋಜ ಕುಮಾರ್ ಕೆಸರು ಗದ್ದೆ ಓಟದಲ್ಲಿಯೂ ತಮ್ಮ ಪ್ರಾಬಲ್ಯ ಮೆರೆದರು.
ಭಾರದ ಚೀಲ ಹೊತ್ತು ಓಡುವ ಸ್ಪರ್ಧೆ ಮತ್ತು ಕೆಸರು ಗದ್ದೆ ಓಟದಲ್ಲಿ ಪ್ರಥಮರಾದ ಮನೋಜ ಕುಮಾರ್ ಒಟ್ಟು ಹತ್ತು ಸಾವಿರ ರೂಪಾಯಿ ಬಹುಮಾನವನ್ನು ಜೇಬಿಗಿಳಿಸಿಕೊಂಡರು.
ಓವೆಲ್ ಮೈದಾನದಲ್ಲಿ ಚೀಲ ಹೊತ್ತು 75 ಮೀಟರ್ ದೂರ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ರೈತರು ತಮ್ಮ ಸಾಮರ್ಥ್ಯ ಮೆರೆದರು. ಮಹಿಳೆಯರೂ ಹೀಂದೆ ಬೀಳಲಿಲ್ಲ. ನೀರು ತುಂಬಿದ ಕೊಡಗಳನ್ನು ಹೊತ್ತು ಓವೆಲ್ ಕ್ರೀಡಾಂಗಣದಲ್ಲಿ ಓಡಿದರು. ಪಿರಿಯಾಪಟ್ಟಣ ತಾಲ್ಲೂಕಿನ ಕೋಗಿಲವಾಡಿಯ ಮಾಲಿನಿ ಪ್ರಥಮ ಸ್ಥಾನ ಪಡೆದು ಸಂಭ್ರಮಿಸಿದರು.
ಫಲಿತಾಂಶಗಳು:
ಪುರುಷರು: ಕಲ್ಲುಗುಂಡು ಎತ್ತುವ ಸ್ಪರ್ಧೆ: ತಮ್ಮೇಗೌಡ (ನಾಗನಹಳ್ಳಿ)-1, ಎಸ್. ಶಶಿಕುಮಾರ್ (ಕೆನ್ನನಕೊಪ್ಪಲು)-2, ರಂಗಸ್ವಾಮಿ (ನಂಜನಗೂಡು)-3, ಸಾಗರ್ (ಪಿರಿಯಾ ಪಟ್ಟಣ)-3.
ಕೆಸರುಗದ್ದೆ ಓಟ: ಮನೋಜಕುಮಾರ್ (ತೀ. ನರಸೀಪುರ)-1, ಪ್ರಸನ್ನ (ಹುಣಸೂರು)-2, ಲಿಂಗರಾಜು (ತೀ. ನರಸೀಪುರ)-3. ಭಾರದ ಚೀಲ ಹೊತ್ತು ಓಟ: ಮನೋಜಕುಮಾರ್ (ತಿ. ನರಸೀಪುರ)-1, ಸಾಗರ್ (ಕೋಮಲಾಪುರ)-2, ಪ್ರಸನ್ನ (ಕಿರಿಜಾಜಿ, ಹುಣಸೂರು ತಾಲ್ಲೂಕು)-3.
ಮಹಿಳೆಯರು: ತುಂಬಿದ ಕೊಡ ಹೊತ್ತು ಓಟ: ಮಾಲಿನಿ (ಕೋಗಿಲವಾಡಿ, ಪಿರಿಯಾಪಟ್ಟಣ ತಾಲ್ಲೂಕು)-1, ನಗೀನಾಭಾನು (ಮಿರ್ಲೆ, ಕೆ.ಆರ್. ನಗರ ತಾಲ್ಲೂಕು)-2, ಸಿ.ಎಂ. ರೇಶ್ಮಾ (ದೇವರಸನಹಳ್ಳಿ, ನಂಜನಗೂಡು)-3.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.