ADVERTISEMENT

ಗುಣಮಟ್ಟದ ವಿದ್ಯುತ್: ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 6:40 IST
Last Updated 7 ಫೆಬ್ರುವರಿ 2012, 6:40 IST

ನಂಜನಗೂಡು: ತಾಲ್ಲೂಕಿನಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ನೀರಾವರಿ ಪಂಪ್‌ಸೆಟ್‌ಗಳು ಕಾರ್ಯ ನಿರ್ವಹಿಸಲಾಗದೆ ಫಸಲು ಒಣಗುತ್ತಿವೆ ಎಂದು ರೈತರು ಸೋಮವಾರ ನಡೆದ ಕುಂದು ಕೊರತೆ ಸಭೆಯಲ್ಲಿ ಸೆಸ್ಕ್ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ದಿನದಲ್ಲಿ ಎರಡು ತಾಸು ಕೂಡ ಗುಣಮಟ್ಟದ ವಿದ್ಯುತ್ ಒದಗಿಸುತ್ತಿಲ್ಲ. ಕಬ್ಬು, ಬಾಳೆ, ಅರಿಶಿಣ ಇತ್ಯಾದಿ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗದೆ ಬೆಳೆ ನಾಶವಾಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋತಿಗಳ ಹಾವಳಿಯಿಂದ ತೆಂಗಿನ ತೋಟಗಳು ಹಾಳಾಗುತ್ತಿವೆ. ಮರಳು ಗಣಿಗಾರಿಕೆಯಿಂದ ನದಿತೀರದ ಮುಳುಗಡೆ ಗ್ರಾಮಗಳಾದ ಬೊಕ್ಕಹಳ್ಳ, ಕುಳ್ಳಂಕನಹುಂಡಿ ಗ್ರಾಮಗಳ ನಿವಾಸಿಗಳಿಗೆ ಧಕ್ಕೆಯಾಗಿದೆ.
 
ಹೊಳೆ  ಬದಿ, ನಾಲಾ ಬದಿಯಲ್ಲಿ ಒತ್ತುವರಿ ಆಗಿದ್ದು, ದನಗಳಿಗೆ ಮೇವಿನ ಕೊರತೆ ಉಂಟಾಗಿದೆ ಎಂದು ರೈತ ಮುಖಂಡ ಬೊಕ್ಕಹಳ್ಳಿ  ನಂಜುಂಡಸ್ವಾಮಿ ದೂರುಗಳ ಸುರಿಮಳೆಗೈದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಎ.ನವೀನ್‌ಜೋಸೆಫ್ ಮಾತನಾಡಿ, ನೀರಾವರಿ ಇಲಾಖೆ ಅಧಿಕಾರಿಗಳು ನದಿ ಮತ್ತು ನಾಲಾ  ಪಕ್ಕದ ರೈತರ ಜಮೀನುಗಳನ್ನು ಸರ್ವೇ ಮಾಡಿಸಿ, ಒತ್ತುವರಿ ತೆರವುಗೊಳಿಸಬೇಕು. ರೈತರ ಬೇಡಿಕೆಯಂತೆ ವಿವಿಧೆಡೆ ಸಾಮಾಜಿಕ ಅರಣ್ಯ ಬೆ ಳೆಸಲು ಅರಣ್ಯ ಇಲಾಖೆ ಮುಂದಾಗಬೇಕು. ನಾಲೆಗಳಿಗೆ ನೀರು ಬಿಡುವ ದಿನಾಂಕವನ್ನು ರೈತರಿಗೆ ನಿಖರವಶಗಿ ತಿಳಿಸುವ ಕೆಲಸವನ್ನು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಮಾಡಬೇಕು ಎಂದು ಹೇಳಿದರು.

ಶೋಕಾಸ್ ನೋಟಿಸ್: ಪ್ರತಿಸಲ ನಡೆಯುವ ವಿವಿಧ ವರ್ಗದ ಕುಂದು ಕೊರತೆ ಸಭೆಗಳಿಗೆ ಗೈರು ಹಾಜರಾಗುತ್ತಿರುವ ಕಾನೂನು ಮಾಪನ ಶಾಸ್ತ್ರ ಇಲಾಖೆ ನಿರೀಕ್ಷಕರಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವುದಾಗಿ ತಹಶೀಲ್ದಾರ್ ತಿಳಿಸಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ.ಲಿಂಗರಾಜು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ್, ಪಶು ವೈದ್ಯ ಇಲಾಖೆಯ ಡಾ.ಆನಂದ್, ಅರಣ್ಯ ಇಲಾಖೆಯ ಜಯಶೇಖರ್, ಪರಮೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚೆನ್ನಪ್ಪ, ಕಡಜೆಟ್ಟಿ ಸೋಮಶೇಖರ್ ಭಾಗಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.