ಪಿರಿಯಾಪಟ್ಟಣ: ಕಾಡುಹಂದಿ ಬೇಟೆಗೆಂದು ಹಾಕಿದ್ದ ಉರುಳಿಗೆ ಸಿಲುಕಿ ಎರಡೂವರೆ ವರ್ಷದ ಗಂಡು ಚಿರತೆಯೊಂದು ಸಾವಿಗೀಡಾಗಿರುವ ಘಟನೆ ತಾಲ್ಲೂಕಿನ ಚೆನ್ನಕಲ್ಕಾವಲ್ ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ.
ತಾಲ್ಲೂಕಿನ ಚೆನ್ನಕಲ್ ಕಾವಲ್ ಗ್ರಾಮದ ಮಂಜುನಾಥ ಎಂಬುವರ ಜಮೀನಿನಲ್ಲಿ ಕಾಡುಹಂದಿ ಹಾವಳಿ ತಡೆಗೆಂದು ತಂತಿ ಬೇಲಿಗೆ ಕೇಬಲ್ ವಯರ್ನಿಂದ ಉರುಳು ಹಾಕಲಾಗಿತ್ತು. ಅರಣ್ಯದಿಂದ ಜಮೀನಿನ ಕಡೆಗೆ ಬಂದ ಚಿರತೆಯ ಕುತ್ತಿಗೆಗೆ ಗುರುವಾರ ರಾತ್ರಿ ಈ ಉರುಳು ಸಿಲುಕಿದ್ದು ಬಿಡಿಸಿ ಕೊಳ್ಳಲಾಗದೆ ಚಿರತೆ ಸಾವಿಗೀಡಾಗಿದೆ ಎಂದು ವನ್ಯಜೀವಿ ಪಶುವೈದ್ಯಾಧಿಕಾರಿ ಡಾ.ಉಮಾಶಂಕರ್ ಹೇಳಿದ್ದಾರೆ.
ದಿನಗೂಲಿ ನೌಕರ ರಾಮಯ್ಯ ಎಂಬುವರು ಶುಕ್ರವಾರ ಬೆಳಿಗ್ಗೆ ಕಾಡಿಗೆ ಬರುತ್ತಿದ್ದ ವೇಳೆ ಚಿರತೆ ಮೃತಪಟ್ಟಿ ರುವುದನ್ನು ಕಂಡು ಅರಣ್ಯ ಇಲಾ ಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ಕುಮಾರ್, ಡಾ.ಉಮಾಶಂಕರ್, ಹುಣಸೂರಿನ ವಲಯ ಅರಣ್ಯಾಧಿಕಾರಿ ಲೋಕೇಶ್, ಉಪ ಅರಣ್ಯಾಧಿಕಾರಿ ರವೀಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿರತೆಯ ಮರಣೋತ್ತರ ಪರೀಕ್ಷೆ ಮಾಡಿ ಸುಮಾರು ಎರಡೂವರೆ ವರ್ಷದ ಚಿರತೆ ಗಂಡು ಮರಿಯಾಗಿದ್ದು, 4.5 ಅಡಿ ಉದ್ದವಿದೆ ಎಂದು ಡಾ.ಉಮಾಶಂಕರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.