ಮದ್ದೂರು: ವರ್ಷಕೊಮ್ಮೆ ಕೇವಲ 36 ಗಂಟೆಗಳ ಕಾಲ ದರ್ಶನ ನೀಡುವ ಇತಿಹಾಸ ಪ್ರಸಿದ್ಧ ಹೆಮ್ಮನಹಳ್ಳಿಯ ಶಕ್ತಿದೇವತೆ ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಉದ್ಘೋಷಗಳ ನಡುವೆ ಗುರುವಾರ ಆರಂಭಗೊಂಡಿತು.
ಬುಧವಾರ ಸಂಜೆಯಿಂದ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ದೇಗುಲದ ಆವರಣದಲ್ಲಿ ಚಂಡಿಕಾ ಮಹಾಯಾಗ ಆರಂಭಗೊಂಡಿತು. ಗಣಪತಿಪೂಜೆ, ಗಂಗಾಪೂಜೆ, ಸ್ವಸ್ತಿರಾಶೋಗ್ನ ಹೋಮ, ವಾಚನ, ಪುಣ್ಯಾಹ, ಪಂಚಗವ್ಯ, ರಕ್ಷಾಬಂಧನ, ದೇವಿಕ ಆರ್ಚನೆ, ಜಪಪಾರಾಯಣ, ಅಗ್ನಿ ಪ್ರತಿಷ್ಠೆಯೊಂದಿಗೆ ಮಹಾಮಂಗಳಾರತಿ ನಡೆಯಿತು.
ಗುರುವಾರ ಮಧ್ಯಾಹ್ನ 12ಗಂಟೆಗೆ ಸರಿಯಾಗಿ ಕಳೆದ ವರ್ಷ ಮುಚ್ಚಲಾಗಿದ್ದ ಅಮೃತ ಮಣ್ಣಿನ ದ್ವಾರವನ್ನು ತೆರೆಯಲಾಯಿತು. ಕಳೆದ ವರ್ಷ ಹಚ್ಚಿ ಇಡಲಾಗಿದ್ದ ನಂದಾದೀಪದ ಬೆಳಕಿನಲ್ಲಿ ಚೌಡೇಶ್ವರಿದೇವಿಯ ದರ್ಶನವನ್ನು ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ಪಡೆದರು.
ರಾಜ್ಯದ ವಿವಿಧೆಡೆಗಳಿಂದ ಅಸಂಖ್ಯಾತ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರಿಗೆ ಚೌಡೇಶ್ವರಿ ದೇಗುಲ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಸಂಜೆ 4ಗಂಟೆಗೆ ಗ್ರಾಮದ ಯುವಕರಿಂದ ಆಕರ್ಷಕ ಬಂಡಿ ಉತ್ಸವ ನಡೆಯಿತು. ಬಂಡಿಗಳ ಮೂಲಕ ಗ್ರಾಮಸ್ಥರು ದೇವಿಯ ಕೊಂಡೋತ್ಸವಕ್ಕೆ ಅಗತ್ಯವಾದ ಸೌದೆಗಳನ್ನು ತಂದು ದೇಗುಲದ ಮುಂಭಾಗದಲ್ಲಿ ಪೇರಿಸಿದರು. ಸಂಜೆ ದೇವಿಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜಾ ಕೈಂಕರ್ಯಗಳು ನಡೆಯಿತು.
ಜಾತ್ರೆಯಲ್ಲಿ ಇಂದು: ಶುಕ್ರವಾರ ಮುಂಜಾನೆ ಚೌಡೇಶ್ವರಿದೇವಿಯ ಕೊಂಡೋತ್ಸವ ನಡೆಯಲಿದೆ. ಮಧ್ಯಾಹ್ನ ದೇವಿಯ ದಿವ್ಯ ಮಹಾರಥೋತ್ಸವ ನಡೆಯಲಿದ್ದು, ರಾತ್ರಿ12ಗಂಟೆಗೆ ದೇವಿಯ ಗರ್ಭಗುಡಿಯಲ್ಲಿ ನಂದಾದೀಪವನ್ನು ಹಚ್ಚಿ, ಗರ್ಭಗುಡಿಯನ್ನು ಎಳನೀರಿನಿಂದ ಕಲೆಸಿದ ಅಮೃತ ಮಣ್ಣಿನಿಂದ ಮುಚ್ಚುವ ಮೂಲಕ ಜಾತ್ರೆಗೆ ಅಂತಿಮ ತೆರೆ ಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.