ADVERTISEMENT

ಜಿಲ್ಲೆಯಲ್ಲಿ 34 ಬಾಲ್ಯ ವಿವಾಹ ತಡೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 10:45 IST
Last Updated 7 ಮಾರ್ಚ್ 2012, 10:45 IST

ಮೈಸೂರು: 18 ವರ್ಷ ಮತ್ತು 21 ವರ್ಷಕ್ಕಿಂತ ಕೆಳಗಿನ ಹುಡುಗ- ಹುಡುಗಿಗೆ ಮದುವೆ ಮಾಡುವುದು ಕಾನೂನಿನಡಿ ಅಪರಾಧ. ಬಾಲ್ಯ ವಿವಾಹಕ್ಕೆ ಸಂಪೂರ್ಣ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಅಧಿಕಾರಿಗಳು ಹತ್ತು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 34 ಬಾಲ್ಯ ವಿವಾಹಗಳನ್ನು ತಡೆಗಟ್ಟಿದ್ದಾರೆ.

2011 ಏಪ್ರಿಲ್‌ನಿಂದ 2012 ಫೆಬ್ರುವರಿ ಅಂತ್ಯದವರೆಗೆ ಒಟ್ಟು 35 ಬಾಲ್ಯ ವಿವಾಹ ದೂರುಗಳು ಜಿಲ್ಲೆಯಲ್ಲಿ ಬಂದಿದ್ದವು. ಈ ಪೈಕಿ 34 ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆಗಟ್ಟಿದ್ದಾರೆ. ಒಂದು ಕೇಸು ದಾಖಲಾಗಿದೆ. ಬಾಲ್ಯ ವಿವಾಹ ನಡೆಯುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ದಾಳಿ ಮಾಡುತ್ತಾರೆ.

ಅಂಕಪಟ್ಟಿ ಇಲ್ಲವೆ ವರ್ಗಾವಣೆ ಪತ್ರವನ್ನು ಪಡೆದು ಹುಡುಗಿ-ಹುಡುಗನ ವಯಸ್ಸನ್ನು ದೃಢಪಡಿಸಿಕೊಳ್ಳುತ್ತಾರೆ. ಒಂದು ವೇಳೆ ಹುಡುಗ- ಹುಡುಗಿಯ ವಯಸ್ಸು 21-18 ಕ್ಕಿಂತ ಕಡಿಮೆ ಇದ್ದರೆ ವಿವಾಹವನ್ನು ತಡೆಗಟ್ಟಿ ದೂರು ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತಾರೆ.

ಬಾಲ್ಯ ವಿವಾಹ ಮಾಡಿಸಿ ಸಿಕ್ಕಿಬಿದ್ದರೆ ಗರಿಷ್ಠ ರೂ.2 ಲಕ್ಷ ದಂಡ, ಜೊತೆಗೆ ಜೈಲು ಶಿಕ್ಷೆ ಅನುಭವಿಸಬೇಕು. ಅಲ್ಲದೆ ಬಾಲ್ಯ ವಿವಾಹದಿಂದ ಮುಂದೆ ಎದುರಿಸಬಹುದಾದ ದುಷ್ಪರಿಣಾಮ ಗಳ ಕುರಿತು ನಾಗರಿಕರಲ್ಲಿ ಅದರಲ್ಲೂ ಗ್ರಾಮೀಣ ಭಾಗದ ಜನತೆಯಲ್ಲಿ ಅಧಿಕಾರಿಗಳು ಹೆಚ್ಚಿನ ಅರಿವು ಮೂಡಿಸುತ್ತಿದ್ದಾರೆ. 

ಪೋಷಕರಲ್ಲಿ ಅರಿವು: ಬಾಲ್ಯ ವಿವಾಹ ಮಾಡುವುದರಿಂದ ಏನೆಲ್ಲಾ ಪರಿಣಾಮಗಳನ್ನು ಎದುರಿಸಬೇಕಾ ಗುತ್ತದೆ ಎಂಬುದರ ಪೋಷಕರಲ್ಲಿ ಅಧಿಕಾರಿಗಳು ಅರಿವು ಮೂಡಿಸುತ್ತಿದ್ದಾರೆ. ಹುಡುಗಿ ದೈಹಿಕವಾಗಿ ಸಂಪೂರ್ಣವಾಗಿ ಬೆಳವಣಿಗೆ ಹೊಂದದೆ ಇರುವುದರಿಂದ ಬಾಲ್ಯ ವಿವಾಹವಾಗಿ ದೈಹಿಕ ಸಂಪರ್ಕ ಹೊಂದಿದರೆ ಅನೇಕ ಸಮಸ್ಯೆಗಳು ತಲೆದೋರುತ್ತವೆ.
 
ಅಲ್ಲದೆ ಹೆರಿಗೆ ಸಂದರ್ಭದಲ್ಲಿ ತೊಂದರೆ ಅನುಭವಿ ಸುವ ಜೊತೆಗೆ ಹುಟ್ಟುವ ಮಗು ಸಹ ಬೆಳವಣಿಗೆ ಆಗದೆ ಅಂಗವೈಕಲ್ಯಕ್ಕೆ ಒಳಗಾಗುವ ಸಾಧ್ಯತೆಯೂ ಇದೆ ಎಂಬುದನ್ನು ಮನದಟ್ಟು ಮಾಡುತ್ತಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಸಭೆ, ಜಾತ್ರೆಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿ ಯಿಂದ ಮಳಿಗೆಗಳನ್ನು ಹಾಕಿ ಕರಪತ್ರ ಹಂಚಿ ಬಾಲ್ಯ ವಿವಾಹದಿಂದ ಆಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ನಗರ ಪ್ರದೇಶ ಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಯರು ಮತ್ತು ಜನಸ್ಪಂದನ ಸಭೆ ಮತ್ತು ಸಾರ್ವಜನಿಕ ಸಭೆಗಳಲ್ಲಿ ಸ್ಟಾಲ್‌ಗಳನ್ನು ಹಾಕಿ ಜಾಗೃತಿ ಮೂಡಿಸಲಾಗುತ್ತಿದೆ.

ಅಧಿಕಾರಿಗಳು ದಾಳಿ ಮಾಡಿ ಬಾಲ್ಯ ವಿವಾಹವನ್ನು ತಡೆಗಟ್ಟಿ ಪೋಷಕರಲ್ಲಿ ಅರಿವು ಮೂಡಿಸಿ ಹೋಗುತ್ತಾರೆ. ಆದರೆ ಮದುವೆಗೆ ಎಲ್ಲವನ್ನು ಅಣಿ ಮಾಡಿಕೊಂಡ ಹುಡುಗ-ಹುಡುಗಿಯ ಪೋಷಕರು ಅರ್ಧಕ್ಕೆ ಮದುವೆ ನಿಂತು ಹೋಗುವುದನ್ನು ತಪ್ಪಿಸುವ ಸಲುವಾಗಿ ಸ್ಥಳದಿಂದ ಅಧಿಕಾರಿಗಳು ತೆರಳಿದ ಮೇಲೆ ದೇವಸ್ಥಾನ ಇಲ್ಲವೆ ಬೇರೊಂದು ಸ್ಥಳಕ್ಕೆ ತೆರಳಿ ಮದುವೆ ಮಾಡಿಸುತ್ತಿದ್ದಾರೆ

 ಇದರಿಂದ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿವೆ.

`ಬಾಲ್ಯ ವಿವಾಹವನ್ನು ತಡೆಗಟ್ಟಲು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹುಡುಗಿಯ ಮದುವೆ ವಯಸ್ಸನ್ನು 18 ರಿಂದ 21ಕ್ಕೆ ಹೆಚ್ಚಿಸಲು ಒಂದೆಡೆ ಚರ್ಚೆ ನಡೆಯುತ್ತಿದೆ. ಬಾಲ್ಯ ವಿವಾಹ ತಡೆಗಟ್ಟಿದ ನಂತರವೂ ದೇವಸ್ಥಾನಗಳಲ್ಲಿ ಅರ್ಧಕ್ಕೆ ನಿಂತ ಮದುವೆಯನ್ನು ಮಾಡಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಒಂದು ವೇಳೆ ಮತ್ತೆ ಮದುವೆ ಮಾಡಿಸಿದಲ್ಲಿ ಅದು ಕಾನೂನಿನಡಿ ಅಪರಾಧ. ಹತ್ತಿರದ ಪೊಲೀಸ್ ಠಾಣೆ, ಜಿಲ್ಲಾಧಿಕಾರಿ ಕಚೇರಿ, ಜಿ.ಪಂ. ಸಿಇಓ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಬಾಲ್ಯ ವಿವಾ ಹದ ಬಗ್ಗೆ ಸಾರ್ವಜನಿಕರು ದೂರು ನೀಡಬಹುದು~ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎನ್.ಆರ್. ವಿಯಯ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.