ADVERTISEMENT

ಜ್ಞಾನಲೋಕ ಸೃಷ್ಟಿಕರ್ತ ರಾಜೇಂದ್ರ ಶ್ರೀ: ಹಂಪನಾ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 10:10 IST
Last Updated 16 ಸೆಪ್ಟೆಂಬರ್ 2011, 10:10 IST

ಮೈಸೂರು: `ಜ್ಞಾನದ ಹಸಿವಿನಿಂದ ಬಳಲುತ್ತಿದ್ದವರ ಕಷ್ಟವನ್ನು ಅರಿತ ರಾಜೇಂದ್ರ ಸ್ವಾಮೀಜಿ ಜ್ಞಾನ ಲೋಕವನ್ನೇ ಸೃಷ್ಟಿಸಿದರು. ಅವರ ಮಾಡಿದ ಮಹಾನ್ ಕಾರ್ಯದಿಂದ ಜೆಎಸ್‌ಎಸ್ ವಿದ್ಯಾಸಂಸ್ಥೆ ಎಲ್ಲೆಡೆ ಜ್ಞಾನ ದಾಸೋಹವನ್ನು ಉಣಬಡಿಸುತ್ತಿದೆ~ ಎಂದು ವಿದ್ವಾಂಸ ಡಾ.ಹಂಪಾ ನಾಗರಾಜಯ್ಯ ಇಲ್ಲಿ ತಿಳಿಸಿದರು.

ಜೆಎಸ್‌ಎಸ್ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಗುರುವಾರ ನಡೆದ ರಾಜೇಂದ್ರ ಶ್ರೀಗಳ 96ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಸಣ್ಣಗಾಗಿ ಆರಂಭವಾದ ಜೆಎಸ್‌ಎಸ್ ಇದೀಗ ಬಹಳ ಎತ್ತರಕ್ಕೆ ಬೆಳೆದಿದೆ. ಶಿಕ್ಷಣ, ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಸಂಸ್ಥೆಯು ಇಷ್ಟು  ಎತ್ತರಕ್ಕೆ ಬೆಳೆಯಲು ರಾಜೇಂದ್ರ ಶ್ರೀಗಳ ಅವಿರತ ಶ್ರಮ ಅಡಗಿದೆ. ಸಂಸ್ಥೆಯನ್ನು ಕಟ್ಟಲು ಶ್ರೀಗಳು ಸಂಕಲ್ಪ ತೊಟ್ಟಿದ್ದರು. ಅದಕ್ಕಾಗಿ ಹಗಲಿರುಳು ಶ್ರಮಿಸಿದರು. ಅದರ ಪ್ರತಿಫಲವಾಗಿ ಲಕ್ಷಾಂತರ ವಿದ್ಯಾ ರ್ಥಿಗಳು ಸಂಸ್ಥೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ~ ಎಂದು ಹೇಳಿದರು.

`ದೇಹದ ಯಾವುದೇ ಭಾಗಕ್ಕೆ ಗಾಯವಾದರೂ ರಕ್ತ ಬರುತ್ತದೆ. ಆದರೆ ಹೃದಯಕ್ಕೆ ಗಾಯವಾದರೆ ಕಣ್ಣೀರು ಬರುತ್ತದೆ. ಹೃದಯ ಕೇವಲ ಮಾಂಸದ ಮುದ್ದೆಯಲ್ಲ. ಹೃದಯ ಬಡಿತ ಸಂಗೀತ ಇದ್ದಂತೆ. ಅಸಹಾಯಕರು, ಹಸಿದವರು, ಹೃದಯಕ್ಕೆ ನೋವಾದವರನ್ನು ಕಂಡರೆ ಶ್ರೀಗಳ ಹೃದಯ ಕರಗುತ್ತಿತ್ತು. ಧೈರ್ಯ ತುಂಬುವ ಶಕ್ತಿ ಶ್ರೀಗಳಲ್ಲಿ ಇತ್ತು. ಎಲ್ಲರು ಸದಾ ಆನಂದವಾಗಿರಬೇಕು. ಆನಂದ ವಾಗಿದ್ದರೆ ಭವಿಷ್ಯದಲ್ಲಿ ಮುಖ್ಯಮಂತ್ರಿ ಆಗುವ ಅವಕಾಶ ಸಿಗಬಹುದು~ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಜೆಎಸ್‌ಎಸ್ ವಿಶ್ವವಿದ್ಯಾನಿಲಯದ ಸಮ ಕುಲಾಧಿಪತಿ ಬಿ.ಎನ್.ಬೆಟ್‌ಕೆರೂರ್ ಮಾತನಾಡಿದರು.
ರಾಮಕೃಷ್ಣ ಆಶ್ರಮದ ಮುಕ್ತಿದಾನಂದಜಿ ಅವರು ಜೆಎಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲ ಯದ ಆವರಣದಲ್ಲಿ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿದರು.

ಜೆಎಸ್‌ಎಸ್ ವಿಶ್ವವಿದ್ಯಾನಿಲಯದ ಕುಲಸಚಿವ ಮೃತ್ಯುಂಜಯ ಪಿ.ಕುಳೇನೂರ್, ಜೆಎಸ್‌ಎಸ್ ವಿದ್ಯಾಪೀಠ ನಿರ್ದೇಶಕ (ಆಡಳಿತ ವಿಭಾಗ) ನಾಗಣ್ಣಾಚಾರ್, ದಂತವೈದ್ಯ ಕಾಲೇಜಿನ ಪ್ರಾಂಶುಪಾಲ ನಂದಲಾಲ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ್, ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಶಿವ ಕುಮಾರ್, ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀಶ ಉಪಾಧ್ಯ, ಶಿವಶಂಕರ್ ಉಪಸ್ಥಿತರಿದ್ದರು. ಜೆಎಸ್‌ಎಸ್ ವಿಶ್ವವಿದ್ಯಾನಿಲಯದ ಉಪ ಕುಲಸಚಿವರಾದ ಕೋಕಿಲಾ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.