ADVERTISEMENT

ನವೀಕರಣ ಸಂತಸ ತಂದಿದೆ; ದಲೈಲಾಮಾ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 5:06 IST
Last Updated 24 ಡಿಸೆಂಬರ್ 2017, 5:06 IST
ಬೈಲಕುಪ್ಪೆ ಟಿಬೆಟನ್ ನಿರಾಶ್ರಿತರ ಶಿಬಿರದಲ್ಲಿರುವ ನವೀಕರಣಗೊಂಡಿರುವ ಗೋಲ್ಡನ್ ಟೆಂಪಲ್
ಬೈಲಕುಪ್ಪೆ ಟಿಬೆಟನ್ ನಿರಾಶ್ರಿತರ ಶಿಬಿರದಲ್ಲಿರುವ ನವೀಕರಣಗೊಂಡಿರುವ ಗೋಲ್ಡನ್ ಟೆಂಪಲ್   

ಪಿರಿಯಾಪಟ್ಟಣ: ದಿನನಿತ್ಯ ಸಾವಿರಾರು ಪ್ರವಾಸಿಗರ ಮನಸೆಳೆಯುತ್ತಿರುವ ಗೋಲ್ಡನ್ ಟೆಂಪಲ್ ನವೀಕರಣ ಕಾರ್ಯ ನನ್ನ ಮನಸಿಗೆ ಸಂತಸ ತಂದಿದೆ ಎಂದು ಟಿಬೆಟನ್ ಧರ್ಮಗುರು ದಲೈಲಾಮಾ ತಿಳಿಸಿದರು. ತಾಲ್ಲೂಕಿನ ಬೈಲಕುಪ್ಪೆ ಬಳಿ ನವೀಕೃತ ನಮ್ಡೊರ್ಲಿಂಗ್ ಗೋಲ್ಡನ್‌ ಟೆಂಪಲ್ ಶುಕ್ರವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಬೌದ್ಧ ಧರ್ಮ ಭಾರತದ ನಳಂದದಿಂದ ಉಗಮವಾಗಿ ಏಷ್ಯಾ ಖಂಡದಲ್ಲಿ ವ್ಯಾಪಿಸಿತ್ತು. ಟಿಬೆಟ್‌ನಲ್ಲಿ ಬೌದ್ಧ ಧರ್ಮ ಪ್ರಚಲಿತಗೊಂಡು ವಿಕಾಸವಾಯಿತು. ಇಲ್ಲಿಗೆ ಬಂದು ಹಿರಿಯ ಬೌದ್ಧ ಮುಖಂಡರನ್ನು ಭೇಟಿಯಾಗಿರುವುದು ಸಂತಸವಾಗಿದೆ ಎಂದರು.

20ನೇ ಶತಮಾನದ ಆರಂಭದಲ್ಲಿ ಟಿಬೆಟ್‌ನಲ್ಲಿ ಪರಿಸ್ಥತಿ ಹದಗೆಟ್ಟು ಸುಮಾರು ಒಂದು ಲಕ್ಷ ಟಿಬೆಟಿಯನ್ನರು ಭಾರತಕ್ಕೆ ವಲಸೆ ಬಂದರು. ಬೌದ್ಧ ಧರ್ಮ ಸಂಸ್ಕೃತಿ ರಕ್ಷಣೆ ಜತೆಗೆ ಬೌದ್ಧ ಶಿಕ್ಷಣ ಸುರಕ್ಷಿತವಾಗಿಡುವಲ್ಲಿ ಸಾಧ್ಯವಾಗಿದೆ.

ADVERTISEMENT

ಭಾರತದಲ್ಲಿ ಬಹತೇಕ ಕಡೆ ಬೌದ್ಧ ಧರ್ಮದ ಸಂಸ್ಕೃತಿ ಕಾಣಬಹುದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಬಳಿಕ ಲಕ್ಷ್ಮೀಪುರ ಗ್ರಾಮದ ತಾಶಿಲಂಪೊ ಮಂದಿರಕ್ಕೆ ಭೇಟಿ ನೀಡಿ ಕೆಲವು ಬೌದ್ಧ ಸನ್ಯಾಸಿಗಳಿಗೆ ಪ್ರವಚನ ನೀಡಿದರು.

ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

ಪಿರಿಯಾಪಟ್ಟಣ: ತಾಲ್ಲೂಕಿನ ಬೈಲಕುಪ್ಪೆಯಲ್ಲಿರುವ ಗೋಲ್ಡನ್ ಟೆಂಪಲ್ ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ ಎಂದು ಸಂಸ್ಥೆ ಮುಖ್ಯ ಕಾರ್ಯದರ್ಶಿ ತುಲುಕ್ ಚೌಧರ್ ತಿಳಿಸಿದ್ದಾರೆ.

ನವೀಕರಣ ಕಾಮಗಾರಿ ಯಿಂದಾಗಿ 6 ತಿಂಗಳಿನಿಂದ ವೀಕ್ಷಣೆ ನಿರ್ಬಂಧಿಸಲಾಗಿತ್ತು. ಮಂದಿರದ ಬುದ್ಧ ಪ್ರತಿಮೆಗಳಿಗೆ ನೂತನ ಅಲಂಕಾರಿಕ ಕೆಲಸ ಮತ್ತು ಟೈಲ್ಸ್ ಕಾಮಗಾರಿ ನಡೆಯುತ್ತಿದ್ದರಿಂದ ಪ್ರವೇಶ ನೀಡುತ್ತಿರಲಿಲ್ಲ. ಈಗ ಕಾಮಗಾರಿ ಮುಗಿದಿದ್ದು, ಇನ್ನು ಮುಂದೆ ಪ್ರತಿದಿನ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಪ್ರವಾಸಿಗರಿಗೆ ಅನುವು ಮಾಡಿಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.