ADVERTISEMENT

ನಿಲ್ಲದ ಗಿರಿಜನ ಶೋಷಣೆ: ವಿಷಾದ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 10:15 IST
Last Updated 7 ಫೆಬ್ರುವರಿ 2011, 10:15 IST

ಹುಣಸೂರು: ಮೂಲಭೂತ ಸವಲತ್ತುಗಳಿಂದ ವಂಚಿತರಾದ ಮೂಲ ನಿವಾಸಿ ಗಿರಿಜನರು ಸುಸಂಸ್ಕೃತ ನಾಗರಿಕರು ಮತ್ತು ಅಧಿಕಾರಿಗಳ ಸಹಕಾರವಿಲ್ಲದೆ ನಿತ್ಯ ಶೋಷಣೆಗೆ ಒಳಗಾಗುತ್ತಿರುವುದು ವಿಷಾದನೀಯ ಎಂದು ಸಂಸದ ಎಚ್.ವಿಶ್ವನಾಥ್ ಹೇಳಿದರು.

ತಾಲೂಕಿನ ಹನಗೋಡು ಹೋಬ ಳಿಯ ಭರತವಾಡಿ, ಕರೆ ಹಾಡಿ ಮತ್ತು ಎಸ್.ಟಿ. ವಸತಿ ವಿದ್ಯಾರ್ಥಿ ನಿಲಯಕ್ಕೆ ಭೇಟಿ ಮಾತನಾಡಿ, ಗಿರಿಜನ ಸಮಾ ಜದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಕೋಟ್ಯಂತರ ರೂಪಾಯಿ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ತಳ ಹಂತ ದಲ್ಲಿ ಆ ಯೋಜನೆಗಳು ವಿದ್ಯಾರ್ಥಿಗಳಿಗೆ ಮುಟ್ಟುತ್ತಿಲ್ಲ ಎಂದರು. ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲು ಮೈಸೂರು ಜಿಲ್ಲೆಗೆ ವಾರ್ಷಿಕ ರೂ. 15 ಲಕ್ಷ ಬಿಡುಗಡೆ ಮಾಡಿ ್ದದರೂ ವಸತಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ಈವರೆಗೆ ವಿತರಿಸದ ಬಗ್ಗೆ ವಿದ್ಯಾರ್ಥಿಗಳು ದೂರಿ ದ್ದಾರೆ ಎಂದರು.

ವಸತಿ ಶಾಲೆಯಲ್ಲಿ ಶೈಕ್ಷಣದ ಗುಣಮಟ್ಟ ಕಳಪೆಯಾಗಿದೆ. ವಸತಿ ಶಾಲೆಗಳಿಗೆ ಅಧ್ಯಾಪಕರ ನೇಮಕ ಗುತ್ತಿಗೆಯಲ್ಲಿ ಮಾಡಿಕೊಳ್ಳುತ್ತಿದ್ದು, ಕಡಿಮೆ ಸಂಬಳಕ್ಕೆ ದುಡಿಯುವ ಶಿಕ್ಷಕರನ್ನು ನೇಮಕ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಿದ್ದೇನೆ ಎಂದರು.

ಆಶ್ರಮ ಶಾಲೆಗಳಿಗಳಿಗೆ ಮಕ್ಕಳು ಬಳಸುವ ಶೂ ಮತ್ತು ಚಪ್ಪಲಿ ಜೋಡಿಸಿಡಲು ಸ್ಟಾಂಡ್ ಖರೀದಿಸಲು ಹಣ ಬಿಡುಗಡೆ ಮಾಡಲಾಗಿತ್ತು. ಅಧಿಕಾರಿಗಳು ಕಳಪೆ ಗುಣಮಟ್ಟದ ಸ್ಟಾಂಡ್ ಖರೀದಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದ್ದೇನೆ ಎಂದರು.

 ತನಿಖೆ: ಕೇಂದ್ರ ಸರ್ಕಾರದಿಂದ ಸುವರ್ಣ ಸಂಕಲ್ಪ ಯೋಜನೆಯಲ್ಲಿ ಹರಿದು ಬಂದ ರೂ 1.55 ಕೋಟಿ ಹಣ ದುರುಪಯೋಗವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ  ವಿಚಾರದಲ್ಲಿ ಅಧಿಕಾರಿಗಳು ಮಾರ್ಗ ಸೂಚಿ ಉಲ್ಲಂಘಿಸಿ ನಗರವಾಸಿಗಳಿಗೆ ಸವಲತ್ತು ಮಾರಾಟ ಮಾಡಿಕೊಂಡಿದ್ದಾರೆ. ವೀರನಹೊಸಹಳ್ಳಿ ಮತ್ತು ನಾಗಾಪುರ ಘಟಕ 1 ಮತ್ತು 2ರಲ್ಲಿ  ಅಭಿವೃದ್ಧಿ ಹೆಸರಿನಲ್ಲಿ ದಾಖಲೆಯಂತೆ 12 ಟಿಲ್ಲರ್ ವಿತರಿಸಿದ್ದು, ವಾಸ್ತವವಾಗಿ ಒಂದು ಟಿಲ್ಲರ್ ಮಾತ್ರ ಇರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಎಂದರು.

ಕ್ರಮ: ಅಭಿವೃದ್ಧಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ  ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.ಶಾಸಕ ಎಚ್. ಪಿ.ಮಂಜುನಾಥ್, ಕೇಂದ್ರ ಪುರಸ್ಕೃತ ಯೋಜನೆಗಳ ಸಮಿತಿಯ ಸದಸ್ಯರಾದ ಎಂ.ಬಿ.ಪ್ರಭು,ಹರಿಹರ ಆನಂದಸ್ವಾಮಿ ಮತ್ತು ಇತರ  ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.