ADVERTISEMENT

ಪೋಷಕರ ಪ್ರೀತಿಯಿಂದ ಮಕ್ಕಳು ವಂಚಿತ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 7:50 IST
Last Updated 4 ಜುಲೈ 2012, 7:50 IST

ಮೈಸೂರು: ಆಧುನಿಕ ಜೀವನ ಶೈಲಿ ಯಿಂದಾಗಿ ಪೋಷಕರ ಪ್ರೀತಿಯಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಮ.ಗು.ಸದಾನಂದಯ್ಯ ಕಳವಳ ವ್ಯಕ್ತಪಡಿಸಿದರು.
ನಗರದ ತರಳಬಾಳು ಶಿಕ್ಷಣ ಕೇಂದ್ರದಲ್ಲಿ ಮಂಗಳವಾರ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ತಂದೆ- ತಾಯಿ ಇಬ್ಬರು ಉದ್ಯೋಗ ದಲ್ಲಿರುವುದರಿಂದ ಮಕ್ಕಳೊಂದಿಗೆ ಕಾಲ ಕಳೆಯಲು ಸಾಧ್ಯವಾಗುತ್ತಿಲ್ಲ. ಮೊಮ್ಮಕ್ಕಳಿಗೆ ಪ್ರೀತಿ ನೀಡುವ ಅಜ್ಜ- ಅಜ್ಜಿಯರು ವೃದ್ಧಾಶ್ರಮ ಸೇರಿದ್ದಾರೆ. ಹೀಗಾಗಿ ಮಕ್ಕಳಲ್ಲಿ ಖಿನ್ನತೆ ಹೆಚ್ಚಾಗುತ್ತಿದ್ದು, ಅವರಲ್ಲಿ ಅಡಗಿರುವ ಕಲಾ ಪ್ರತಿಭೆ ಹೊರಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ಬದಲಾದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ದೊರೆಯುತ್ತಿಲ್ಲ. ಸ್ವತಂತ್ರರಾಗಿ ಬದುಕು ರೂಪಿಸಿಕೊಳ್ಳುವ ಕಲೆಯನ್ನು ಶಿಕ್ಷಣ ನೀಡುತ್ತಿಲ್ಲ. ಪಠ್ಯದಲ್ಲಿ ನೀತಿ ಪಾಠಗಳೂ ಇಲ್ಲ. ಬೌದ್ಧಿಕ, ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಶಿಕ್ಷಣದ ಅಗತ್ಯವಿದ್ದು, ಪಠ್ಯದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಉತ್ತೇ ಜನ ನೀಡಬೇಕು ಎಂದು ಹೇಳಿದರು.

ರಂಗಕರ್ಮಿ ಯು.ಎಸ್.ರಾಮಣ್ಣ ಮಾತನಾಡಿ, ಶಾಲೆಯಲ್ಲಿ ಕಲಿತ ಶಿಸ್ತನ್ನು ಜೀವನದಲ್ಲೂ ಅಳವಡಿಸಿ ಕೊಳ್ಳಬೇಕು. ಶ್ರೀಸಾಮಾನ್ಯನಿಗೂ ಗೌರವ ನೀಡುವ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ಅಭಿನಯದಂತಹ ಕಲೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಳಿಕ `ಸದಾರಮೆ~ ನಾಟಕದ ಪ್ರಸಂಗವನ್ನು ಅಭಿನಯಿಸಿ ಮಕ್ಕಳನ್ನು ರಂಜಿಸಿದರು.
ತರಳಬಾಳು ಶಿಕ್ಷಣ ಕೇಂದ್ರದ ವಿಶೇಷ ಅಧಿಕಾರಿ ಪ್ರೊ.ಜಿ.ಕೆ. ಚಂದ್ರಶೇಖರಪ್ಪ, ಮುಖ್ಯ ಶಿಕ್ಷಕ ವಿ.ಆನಂದಪ್ಪ, ಶಿಕ್ಷಕಿ ವಿಜಯಲಕ್ಷ್ಮಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.