ADVERTISEMENT

ಪ್ರಜ್ಞಾವಂತಿಕೆ ಜಾಗೃತಿ ಧಾರ್ಮಿಕ ಸಭೆ ಆಶಯ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 9:00 IST
Last Updated 8 ಫೆಬ್ರುವರಿ 2012, 9:00 IST

ತಿ.ನರಸೀಪುರ:  ಮನುಷ್ಯರಲ್ಲಿ ಪ್ರಜ್ಞಾವಂತಿಕೆ ಮೂಡಿಸುವುದೇ ಧಾರ್ಮಿಕ ಸಭೆಗಳ ಆಶಯ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

 ತಾಲ್ಲೂಕಿನ ತಲಕಾಡು ಸಮೀಪವಿರುವ ಮುಡುಕುತೊರೆ ಜೆಎಸ್‌ಎಸ್ ಮಂಗಳಮಂಟಪದಲ್ಲಿ ಸೋಮವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಭ್ರಷ್ಟಚಾರ, ಸ್ವಾರ್ಥ, ದುರಾಸೆಗಳು ಅನೈತಿಕತೆಗೆ ದಾರಿ ಮಾಡಿಕೊಡುತ್ತಿವೆ. ಉಳ್ಳವರು ಬೇಕಾದಷ್ಟನ್ನು ಇಟ್ಟುಕೊಂಡು ಇತರರಿಗೆ ನೆರವು ನೀಡಬೇಕು. ಎಲ್ಲರು ಸಹಕಾರ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸುತ್ತೂರು ಮಠಕ್ಕೂ, ಮುಡುಕುತೊರೆಗೂ ಅವಿನಾಭಾವ ಸಂಬಂಧವಿದೆ. ಹಿರಿಯ ಗುರುಗಳು ಇದ್ದ ವೇಳೆ ಇಲ್ಲಿ ಧಾರ್ಮಿಕ ಸಭೆ ನಡೆಯುತ್ತಿತ್ತು. ಎರಡು ವರ್ಷಗಳಿಂದ ಈಗ ಮತ್ತೆ ಧಾರ್ಮಿಕ ಸಭೆ ಆರಂಭಿಸಲಾಗಿದೆ ಎಂದರು.

 ಕನಕಪುರ ದೇಗುಲ ಮಠದ ಮುಮ್ಮಡಿ ಶ್ರೀನಿರ್ವಾಣ ಸ್ವಾಮೀಜಿ ಹಾಗೂ ವಾಟಾಳು ಸಿದ್ದಲಿಂಗಶಿವಚಾರ್ಯ ಸ್ವಾಮೀಜಿ ಮಾತನಾಡಿ, `ಸುತ್ತೂರು ಮತ್ತು ಮುಡುಕುತೊರೆ ಕ್ಷೇತ್ರದ ಸಂಬಂಧಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಇಲ್ಲಿ ಧಾರ್ಮಿಕ ಸಭೆಗಳನ್ನು ನಡೆಸಿ ಜನರಿಗೆ ತಿಳಿವಳಿಕೆ ನೀಡುತ್ತಿದ್ದರು.
 
ಗುರುಗಳನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ತಂದು ಮೆರವಣಿಗೆ  ಮಾಡಲಾಗುತ್ತಿತ್ತು. ಅವರ ಪರಂಪರೆಯಂತೆ ಇಲ್ಲಿ ನಡೆಯುವ ಧಾರ್ಮಿಕ ಸಭೆಗಳು ಜನರಲ್ಲಿ ಆತ್ಮಸ್ಥೈರ್ಯವನ್ನು ವೃದ್ಧಿಸುತ್ತವೆ ಎಂದರು.

ನಿವೃತ್ತ ಪ್ರಾಧ್ಯಾಪಕ ಎನ್. ನಂಜುಂಡಯ್ಯ ಮಾತನಾಡಿ ಮುಡುಕು ತೊರೆ ಶ್ರೀಕ್ಷೇತ್ರ ಹಾಗೂ ನಾಡಮಠದ ಕುರಿತು ಉಪನ್ಯಾಸ ನೀಡಿದರು.

  ಪಿಆರ್‌ಎಂ.ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವೀರಭದ್ರಸ್ವಾಮಿ, ಕರ್ನಾಟಕ ಮೃಗಾ ಲಯ ಪ್ರಾಧಿಕಾರದ ಅಧ್ಯಕ್ಷ ಎಂ. ನಂಜುಂಡಸ್ವಾಮಿ ಮಾತನಾಡಿದರು.

ಜೆಎಸ್‌ಎಸ್ ಉಪ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ಕಾರ್ಯದರ್ಶಿ ಶಿವಕುಮಾರಸ್ವಾಮಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಶಿವಶಂಕರಪ್ಪ, ಮೈಸೂರು ಚಿದಾನಂದಸ್ವಾಮಿ,  ಹೇಟೆಲ್ ರಾಜಣ್ಣ, ಕುರುಬೂರು ಸಿದ್ದೇಶ್, ಶಂಭುದೇವನಪುರ ಶಿವನಂಜಪ್ಪ, ಕೈಯಂಬಳ್ಳಿ ನಟರಾಜು, ಮೂಗೂರು ಪಟ್ಟಸಿದ್ದಪ್ಪ, ಮಲ್ಲಣ್ಣ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.