ADVERTISEMENT

ಬಿಲ್ ಕಲೆಕ್ಟರ್ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 12:15 IST
Last Updated 9 ಫೆಬ್ರುವರಿ 2011, 12:15 IST

ಕೆ.ಆರ್.ನಗರ: ‘ಪಟ್ಟಣದ ಅಭಿವೃದ್ಧಿ ವಿಚಾರ ಕೇಳಿದರೆ ಕೇಸು ಹಾಕಿ ಹೆದರಿಸುವ ಪುರಸಭೆ ನೌಕರರ ಮೇಲೆ  ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಬಿಜೆಪಿ ಸದಸ್ಯ ಎನ್.ರವಿ ಪುರಸಭೆ ಸಾಮಾನ್ಯಸಭೆಯಲ್ಲಿ  ಮಂಗಳವಾರ ಪ್ರತಿಭಟನೆ ನಡೆಸಿದರು.ಸಭೆಯಲ್ಲಿ ಸದಸ್ಯ ಎನ್.ರವಿ ಮಾತನಾಡಿ, ಬಿಲ್ ಕಲೆಕ್ಟರ್ ನಂಜುಂಡಸ್ವಾಮಿ ಅವರಿಗೆ ಪಟ್ಟಣದ ಅಭಿವೃದ್ಧಿ  ಬಗ್ಗೆ ಮಾತನಾಡಿದರೆ ಹೊಡೆದರು ಎಂದು ದೂರು ನೀಡುತ್ತಾರೆ. ಇದರಿಂದ ಸಾವಿರಾರು ರೂಪಾಯಿ ಖರ್ಚು  ಮಾಡಿ ಹೈಕೋರ್ಟ್‌ನಿಂದ ಜಾಮೀನು ಪಡೆಯುವಂತಾಯಿತು.

ಪರಿಸ್ಥಿತಿ ಹೀಗೆ ಮುಂದುವರೆದರೆ ಅಭಿವೃದ್ಧಿ ಕೆಲಸ  ಮಾಡುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಇಂತಹ ನೌಕರರ ಮೇಲೆ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು  ಎಂದು ಒತ್ತಾಯಿಸಿ ಅಧ್ಯಕ್ಷರ ಎದುರಿನ ಟೇಬಲ್ ಮೇಲೆ ಮಲಗಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಸದಸ್ಯ ಪಿ.ಶಂಕರ್ ಅವರು ಎನ್.ರವಿ ಅವರನ್ನು ಸಮಾಧಾನ ಪಡಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ್ ಮಾತನಾಡಿ, ಪುರಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳ ಹೊರತಾಗಿ  ಇನ್ಯಾವುದೇ ವಾರ್ಡ್‌ಗಳಲ್ಲಿ ಕೆಲಸಗಳು ಆಗುತ್ತಿಲ್ಲ ಎಂದು ಆರೋಪಿಸಿದರು.ಸದಸ್ಯ ಪಿ.ಶಂಕರ್ ಮಾತನಾಡಿ, ಪಟ್ಟಣದ ಸ್ವಚ್ಛತೆಗಾಗಿ ರೂ.10ಲಕ್ಷ ವಿತರಣೆಯಾದರೂ ಇನ್ನೂ ಹಲವಾರು  ವಾರ್ಡ್‌ಗಳಲ್ಲಿ ಸ್ವಚ್ಛತೆಯಾಗಿಲ್ಲ. ಸ್ವಚ್ಛತೆ ಕೆಲಸಕ್ಕೆ ಹಣ ಬಿಡುಗಡೆ ಮಾಡುವಾಗ ಆಯಾ ವಾರ್ಡ್ ಸದಸ್ಯರ   ಗಮನಕ್ಕೆ ತರದೇ ಹಣ ಬಿಡುಗಡೆ ಮಾಡಕೂಡದು ಎಂದರು.

ಅಲ್ಲದೇ ಅಧ್ಯಕ್ಷರು, ಅಧಿಕಾರಿಗಳಿಗೆ ಉತ್ತಮ ದರ್ಜೆಯ ಕುರ್ಚಿಗಳು ಹಾಕಲಾಗಿದೆ. ಸದಸ್ಯರಿಗೆ ಕಡಿಮೆ   ದರ್ಜೆಯ ಕುರ್ಚಿಗಳು ಹಾಕಲಾಗಿದೆ. ಇಂತಹ ತಾರತಮ್ಯ ಬಿಟ್ಟು ಎಲ್ಲರಿಗೂ ಉತ್ತಮ ದರ್ಜೆಯ ಕುರ್ಚಿಗಳನ್ನೇ  ಹಾಕಿ ಎಂದು ಒತ್ತಾಯಿಸಿದರು.ಅಧ್ಯಕ್ಷ ತಮ್ಮನಾಯಕ ಮಾತನಾಡಿ, ಅಧ್ಯಕ್ಷರು ಮತ್ತು ಸದಸ್ಯರು ತೆಗೆದುಕೊಳ್ಳುವ ಸಂಭಾವನೆ ಕೇವಲ  300 ರೂಪಾಯಿ. ಆದರೆ ಅಧಿಕಾರಿಗಳು ತೆಗೆದುಕೊಳ್ಳುವ ವೇತನ ಸಾವಿರಾರು ರೂಪಾಯಿ. ಸಂಭಾವನೆಗೆ ತಕ್ಕಂತೆ  ಕುರ್ಚಿಗಳು ಹಾಕಲಾಗಿದೆ. ಇದರಲ್ಲಿ ಯಾವುದೇ ತಾರತಮ್ಯ ನಡೆದಿಲ್ಲ ಎಂದು ಗೇಲಿ ಮಾಡಿದರು.ಉಪಾಧ್ಯಕ್ಷ ಸುಬ್ರಹ್ಮಣ್ಯ, ಮುಖ್ಯಾಧಿಕಾರಿ ನಾಗರಾಜು ಸೇರಿದಂತೆ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.