ADVERTISEMENT

ಭಿನ್ನಮತ ತೊರೆಯಲು ಕುರುಬ ಜನಾಂಗಕ್ಕೆ ಕರೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 6:40 IST
Last Updated 3 ಜೂನ್ 2011, 6:40 IST

ಕೆ.ಆರ್.ನಗರ: ಸಮಾಜದ ನಾಯಕರು ನೀಡುವ ಹೇಳಿಕೆಗಳಿಂದ ನಾವೆಲ್ಲರೂ ತಲೆ ತಗ್ಗಿಸುವಂತಾಗಿದೆ~ ಎಂದು ಶಾಸಕ ವರ್ತೂರ್ ಪ್ರಕಾಶ್ ಬುಧವಾರ ಅಸಮಾಧಾನವ್ಯಕ್ತ ಪಡಿಸಿದರು.

ಪಟ್ಟಣದ ಸಂಗೊಳ್ಳಿ ಸಮುದಾಯ ಭವನದಲ್ಲಿ ಕಾಗಿನೆಲೆ ಕನಕಗುರು ಶಾಖಾ ಮಠದ ವತಿಯಿಂದ ಅಮವಾಸ್ಯೆಯ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಗುರು ವಂದನಾ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಳೇ ಮೈಸೂರು ಪ್ರಾಂತ್ಯದಲ್ಲಿ ಕುರುಬ ಸಮಾಜದವರು 15 ರಿಂದ 20 ಮಂದಿ ಶಾಸಕರಾಗಿ ಆಯ್ಕೆಯಾಗ ಬೇಕಿತ್ತು. ಆದರೆ ನಮ್ಮ ಸಮಾಜದಲ್ಲಿನ ಒಳಜಗಳದಿಂದ ಇಂದು ನಾವು ಹೆಚ್ಚು  ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಈ ನಡುವೆ ನಮ್ಮ ಸಮಾಜದ ನಾಯಕರು ನೀಡುವ ಹೇಳಿಕೆಗಳಿಂದ ಮುಜುಗುರ ಅನುಭವಿಸುವಂತಾಗಿದೆ ಎಂದು ಹೇಳಿದರು.

ನಮ್ಮಲ್ಲಿ ಭಿನ್ನಾಭಿಪ್ರಾಯ ತೊರೆದು ಸಮಾಜದ ಏಳಿಗೆಗಾಗಿ ಹೆಚ್ಚು ನಮ್ಮ ಸಮಾಜದವರನ್ನೇ ಶಾಸಕರನ್ನಾಗಿ ಆಯ್ಕೆ ಮಾಡಲು ಪ್ರಥಮ ಆದ್ಯತೆ ನೀಡಬೇಕು. ಮುಂದಿನ ಬಾರಿ ರಾಜ್ಯದಲ್ಲಿ  ಕನಿಷ್ಟ 50 ಕುರುಬ  ಶಾಸಕರನ್ನು ಆಯ್ಕೆ ಮಾಡಿಬೇಕು. ಇದರಿಂದ ನಾವೇ ರಾಜ್ಯದ ಅಧಿಕಾರ ಹಿಡಿಯಲು ಸಹಾಯವಾಗುತ್ತದೆ ಎಂದರು.

ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ ಮಾತನಾಡಿ, ಒಂದೇ ಸಮಾಜದಿಂದ ನಾಯಕರಾಗಲು ಯಾರಿದಂಲೂ ಸಾಧ್ಯವಿಲ್ಲ. ನಾಯಕರಾದವರು ಎಲ್ಲ ಸಮಾಜದವರೊಂದಿಗೆ ಬೆರೆಯ ಬೇಕಾಗುತ್ತದೆ. ರಾಜಕಾರಣದಲ್ಲಿ ಇಂದು ಪ್ರಾಮಾಣಿಕರು, ಸ್ವಾಭಿಮಾನಿ ಗಳು ಮನೆ ಸೇರಿಕೊಳ್ಳುವಂತಾಗಿದೆ. ಇನ್ನಾದರು  ಚುನಾಯಿತ ಪ್ರತಿನಿಧಿಗಳು ಪ್ರಾಮಾಣಿಕತೆಯಿಂದ ನಡೆದು ಕೊಳ್ಳಬೇಕಾಗಿದೆ ಎಂದರು.

ಶಿವಾನಂದಪುರಿ ಸ್ವಾಮೀಜಿ, ಮಾದಹಳ್ಳಿ ಸಾಂಬ ಸದಾಶಿವ ಸ್ವಾಮೀಜಿ, ಶಾಸಕ ಸಾ.ರಾ.ಮಹೇಶ್, ಬಿಜೆಪಿ ಮುಖಂಡ ಡಿ.ರವಿಶಂಕರ್ ಮಾತನಾಡಿದರು.

 ಇದೇ ಸಂದರ್ಭದಲ್ಲಿ ಶಿವಾನಂದಪುರಿ ಸ್ವಾಮೀಜಿಗಳ ಜನ್ಮ ದಿನಾಚರಣೆ ಪ್ರಯುಕ್ತ ತುಲಾಭಾರ ಮತ್ತು ಮುಖಂಡರಿಗೆ ಸನ್ಮಾನವಿತ್ತು. ಅಮಿತ್ ವಿ.ದೇವರಹಟ್ಟಿ, ಜಿಪಂ ಸದಸ್ಯ  ಸಿ.ಜೆ.ದ್ವಾರಕೀಶ್, ಚಿಕ್ಕಮಂಗಳೂರು ಜಿಪಂ ಸದಸ್ಯೆ ರೇಖಾ ಹುಲಿಯಪ್ಪ, ತಾಪಂ ಸದಸ್ಯ ನಾಗಣ್ಣ, ಡಾ.ಟಿ.ಶಿವ ನಂಜಪ್ಪ,  ಮೂಡಲ ಕೊಪ್ಪಲು ಕೃಷ್ಣೇಗೌಡ, ಯಡತೊರೆ ಲೊಕೇಶ್, ಸಮಾಜ  ಸೇವಕ ಮಂಜುನಾಥ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.