ADVERTISEMENT

ಮಕ್ಕಳ ರೋಗದ ನಿರ್ಲಕ್ಷ್ಯ ಸಲ್ಲದು

​ಪ್ರಜಾವಾಣಿ ವಾರ್ತೆ
Published 1 ಮೇ 2011, 10:25 IST
Last Updated 1 ಮೇ 2011, 10:25 IST

ಮೈಸೂರು: ಕಿವಿ, ಮೂಗು ಮತ್ತು ಗಂಟಲು ತೊಂದರೆಗಳು ಚಿಕ್ಕಮಕ್ಕಳಲ್ಲದೆ ದೊಡ್ಡವರಿಗೂ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿಯೇ ಇದಕ್ಕೆ ಚಿಕಿತ್ಸೆ ಪಡೆಯದಿದ್ದರೆ ಜೀವಕ್ಕೆ ಅಪಾಯ ಎಂದು ಕಿವಿ, ಮೂಗು ಮತ್ತು ಗಂಟಲು ತಜ್ಞ ಡಾ.ಟಿ.ಕೆ.ಪ್ರಕಾಶ್ ಹೇಳಿದರು.

ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಲ್ಲಿ ಕಾಣಿಸಿಕೊಳ್ಳುವ ರೋಗಗಳನ್ನು ಪತ್ತೆ ಹಚ್ಚುವುದು, ಪರಿಹಾರ ಹೇಗೆ ಎಂಬುದರ ಬಗ್ಗೆ ಸಲಹೆ, ಚಿಕಿತ್ಸೆ ಕುರಿತು ಮಾಹಿತಿ ನೀಡಿದರು.

ಆರಂಭದಲ್ಲಿ ಕಿವಿ ಸಮಸ್ಯೆಗಳ ಬಗ್ಗೆ ತಿಳಿಸಿದ ಅವರು, ಕಿವಿ ನೋವಿಗೆ ಹಲವು ರೀತಿಯ ಕಾರಣಗಳಿವೆ. ದೇಹದ ಇತರೆ ಭಾಗಗಳಲ್ಲಿ ತೊಂದರೆ ಇದ್ದರೂ ಕಿವಿ ನೋವು ಬರುತ್ತದೆ. ಅಲ್ಪಾವಧಿ ಕಾಯಿಲೆಗಳಿಗೆ ಔಷಧ ಹಾಗೂ ದೀರ್ಘಾವಧಿ ಕಾಯಿಲೆಗಳಿಗೆ ಅವಶ್ಯಕತೆ ಇದ್ದರೆ ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸಬಹುದು. ಆರಂಭಿಕ ಹಂತದಲ್ಲಿಯೇ ಗುಣಪಡಿಸಿಕೊಳ್ಳುವುದು ಒಳ್ಳೆಯದು ಎಂದರು.

ಕೆಲವು ಔಷಧ ತೆಗೆದುಕೊಳ್ಳುವುದರಿಂದ ಕಿವುಡುತನ ಬರುವ ಸಾಧ್ಯತೆ ಇದೆ. ಮಲೇರಿಯಾ ಹಾಗೂ ಕ್ಯಾನ್ಸರ್ ರೋಗಕ್ಕೆ ಔಷಧ ತೆಗೆದುಕೊಳ್ಳುವಾಗ ಎಚ್ಚರವಹಿಸಬೇಕು. ತುಂಬ ಶಬ್ಧ ಇರುವ ಕಡೆ ಕೆಲಸ ನಿರ್ವಹಿಸುವಾಗ ಕಿವುಡು ಉಂಟಾಗಲಿದೆ ಎಂದರು.

ಮೂಗಿನಲ್ಲಿ ರಕ್ತ ಸೋರಿಕೆಯಾಗುತ್ತಿದ್ದರೆ ಮೂಗಿನ ತುದಿಯನ್ನು ಗಟ್ಟಿಯಾಗಿ ಹಿಡಿದು ಬಾಯಲ್ಲಿ ಹತ್ತು ನಿಮಿಷ ಉಸಿರಾಡಬೇಕು.  ಶೇ.60 ರಷ್ಟು ಮೂಗಿನ ತೊಂದರೆಯೇ ಗೊರಕೆಗೆ ಕಾರಣ. ಮೂಗಿನ ಮೂಳೆ ವಕ್ರವಾಗಿರುವುದು ಹಾಗೂ ಕೊಬ್ಬಿನಾಂಶ ಹೆಚ್ಚಿದ್ದರೆ ಗೊರಕೆ ಹೊಡೆಯುವುದು ಸಾಮಾನ್ಯ. ಗೊರಕೆ ಹೊಡೆಯುವವರನ್ನು ಅಂಗಾತ ಮಲಗಲು ಬಿಡಬಾರದು. ಎಡಕ್ಕೆ ಮತ್ತು ಬಲಕ್ಕೆ ಮಲಗಿಸಬೇಕು ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.