ಮೈಸೂರು: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ‘ಒಖಿ’ ಚಂಡಮಾರುತದ ಪ್ರಭಾವ ಸಾಂಸ್ಕೃತಿಕ ನಗರಿಗೂ ತಟ್ಟಿದೆ. ಶುಕ್ರವಾರ ಇಡೀ ದಿನ ಜಿಟಿಜಿಟಿ ಮಳೆಯಾಗಿದೆ. ವೇಗವಾಗಿ ಬೀಸುವ ಗಾಳಿಗೆ ಚಳಿಯೂ ಹೆಚ್ಚಾಯಿತು. ಮೋಡ ಕವಿದ ವಾತಾವರಣ ಇದ್ದುದರಿಂದ ಸೂರ್ಯನ ದರ್ಶನವಾಗಿದ್ದು ಅಪರೂಪ. ಇನ್ನೂ ನಾಲ್ಕು ದಿನ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗುರುವಾರ ಸಂಜೆ ತುಂತುರು ಮಳೆಯಾಗಿತ್ತು. ಆದರೆ, ರಾತ್ರಿಯಿಂದ ಮಳೆ ಸ್ವಲ್ಪ ಬಿರುಸುಗೊಂಡಿತು. ಇದರಿಂದ ರಸ್ತೆಯಲ್ಲಿ ನೀರು ಹರಿಯಿತು. ಶುಕ್ರವಾರ ಬೆಳಿಗ್ಗೆ ಜನರು ಹಾಸಿಗೆಯಿಂದ ಮೇಲೇಳುತ್ತಿದ್ದಂತೆ ವಾತಾವರಣ ಸಂಪೂರ್ಣ ಬದಲಾಗಿತ್ತು.
ಅಕಾಲಿಕವಾಗಿ ಸುರಿದ ಮಳೆಯು ಭತ್ತ ಮತ್ತು ರಾಗಿ ಕೊಯ್ಲಿಗೆ ಅಡ್ಡಿಯಾಯಿತು. ಬೆಳೆದು ನಿಂತ ಪೈರನ್ನು ಅನೇಕರು ಕೊಯ್ಲು ಮಾಡುತ್ತಿದ್ದರು. ಮೊಡ ಕವಿದ ವಾತಾವರಣವಿದ್ದರೂ ಮಳೆ ಬರುವ ಸಾಧ್ಯತೆ ಕಡಿಮೆ ಎಂದು ರೈತರು ಅಂದಾಜಿಸಿದ್ದರು. ಆದರೆ, ಏಕಾಏಕಿ ಧರೆಗೆ ಇಳಿದ ವರುಣ ರೈತರಿಗೆ ಸಂಕಷ್ಟ ತಂದೊಡ್ಡಿತು. ಮಳೆಯೊಂದಿಗೆ ಬೀಸುವ ಬಿರು ಗಾಳಿಯು ಚಳಿಯನ್ನು ಹೆಚ್ಚಿಸಿದೆ. ಮೈನಡುಗುವ ಚಳಿಯಲ್ಲಿ ಮನೆಯಿಂದ ಹೊರಗೆ ಬರಲು ಅನೇಕರು ಹಿಂದೇಟು ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.