ADVERTISEMENT

ಮಾನವನ ಸ್ವಾರ್ಥದಿಂದ ಅರಣ್ಯ ನಾಶ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 7:10 IST
Last Updated 4 ಫೆಬ್ರುವರಿ 2011, 7:10 IST

ಮೈಸೂರು: ‘ಮಾನವ ತನ್ನ ಸ್ವಾರ್ಥಕ್ಕಾಗಿ ಅರಣ್ಯ ಹಾಗೂ ಕೃಷಿ ಭೂಮಿಯನ್ನು ಅವಶ್ಯಕತೆಗಿಂತ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾನೆ’ ಎಂದು ಚಿಪ್ಕೋ ಚಳವಳಿ ನಾಯಕ ಸುಂದರ್‌ಲಾಲ್ ಬಹುಗುಣ ಆತಂಕ ವ್ಯಕ್ತಪಡಿಸಿದರು.

ನಗರದ ಜಯಲಕ್ಷ್ಮಿಪುರಂನ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಪರಿಸರ ಸಂರಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ನಗರೀಕರಣ ಮತ್ತು ಅರಣ್ಯ ನಾಶದಿಂದಾಗಿ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ನಿರಂತರವಾಗಿ ಕಡಿಮೆಯಾಗುತ್ತಿದೆ. ಅರಣ್ಯ ಹಾಗೂ ನೀರಿನ ಮೂಲಗಳೂ ಕಡಿಮೆಯಾಗುತ್ತಿವೆ. ಜಾಗತಿಕ ತಾಪಮಾನದಿಂದಾಗಿ ಹಿಮಾಲಯ ಪರ್ವತದಲ್ಲೇ ಮರುಭೂಮಿಯಂತಹ ವಾತಾವರಣ ಸೃಷ್ಟಿಯಾಗುತ್ತಿದೆ. ಈ ನಿಟ್ಟಿನಲ್ಲಿ ಯುವಕರು ಅರಣ್ಯ ನಾಶವನ್ನು ತಡೆಗಟ್ಟಲು ಮುಂದಾಗಬೇಕು’ ಎಂದು ಹೇಳಿದರು.

‘ಅರಣ್ಯ ನಾಶದಿಂದ ಭೂ ಸವಕಳಿ ಹೆಚ್ಚಾಗುತ್ತಿದೆ. ರೈತರು ರಾಸಾಯನಿಕ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿರುವುದರಿಂದ ಮಣ್ಣಿನ ಸತ್ವ ನಾಶವಾಗುತ್ತಿದೆ. ಸ್ವಾತಂತ್ರ್ಯ ಬಂದು 64 ವರ್ಷಗಳಾದರೂ ಸಮಸ್ಯೆಗಳು ಇನ್ನೂ ಉಳಿದುಕೊಂಡಿವೆ. ಈ ಸಮಸ್ಯೆಗಳನ್ನು ಹೋಗಲಾಡಿಸಲು ಯುವಕರು ತಮ್ಮಲ್ಲಿರುವ ಅಗಾಧ ಶಕ್ತಿಯನ್ನು ಬಳಸಿಕೊಂಡು ನಾಡು ಕಟ್ಟುವ ಕೆಲಸಕ್ಕೆ ಮುಂದಾಗಬೇಕು’ ಎಂದು ತಿಳಿಸಿದರು.

‘ಜಾಗತಿಕ ಪರಿಸರ ಸಂರಕ್ಷಣೆಯ ಉದ್ದೇಶದಿಂದ ಚಿಪ್ಕೋ ಚಳವಳಿಯನ್ನು ಆರಂಭಿಸಲಾಯಿತು. ಅರಣ್ಯ ಸಂಪತ್ತು ಕಾಯಂ ಆಗಿ ಇರುವಂತಹದ್ದು. ಆದ್ದರಿಂದ, ಅರಣ್ಯ ನಾಶ ಮಾಡದೇ ಸಂರಕ್ಷಣೆಗೆ ಪ್ರತಿಯೊಬ್ಬರೂ ಪಣತೊಡಬೇಕು. ನಗರೀಕರಣ ತಡೆಗಟ್ಟಲು ಯುವಕರು ಮನಸ್ಸು ಮಾಡಬೇಕು’ ಎಂದರು.ಕಾರ್ಯಕ್ರಮದಲ್ಲಿ ಮಹಾಜನ  ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಾಸುದೇವಮೂರ್ತಿ, ಕಾರ್ಯದರ್ಶಿ ಸುಬ್ರಹ್ಮಣ್ಯಂ, ಪ್ರಾಂಶುಪಾಲ ಕೆ.ವಿ.ಪ್ರಭಾಕರ್ ಸೇರಿದಂತೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.