ADVERTISEMENT

ಮಾಸಾಶನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 5:55 IST
Last Updated 2 ಆಗಸ್ಟ್ 2012, 5:55 IST

ತಿ.ನರಸೀಪುರ: ವೃದ್ಧಾಪ್ಯ, ವಿಧವಾ ವೇತನ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳಡಿ ಮಾಸಾಶನ ಪಡೆಯುವ ಫಲಾನುಭವಿಗಳಿಗೆ ತ್ವರಿತವಾಗಿ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ವಿಧವಾ ವೇತನ, ವೃದ್ಧಾಪ್ಯ ವೇತನ ಹಾಗೂ ಅಂಗವಿಕಲ ಸೌಲಭ್ಯ ಪಡೆಯುತ್ತಿರುವ ಕೆಲವು ಫಲಾನುಭವಿಗಳಿಗೆ ಮರು ಆದೇಶ ಪ್ರತಿ ಪಡೆಯುವಂತೆ ಸೂಚಿಸಿ ಮಾಸಾಶನ ರದ್ದು ಮಾಡಿರುವುದರಿಂದ ಅವರಿಗೆ ಹಣ ಬಿಡುಗಡೆಯಾಗಿಲ್ಲ. ಇದನ್ನೇ ನಂಬಿ ಜೀವನ ನಿರ್ವಹಣೆ ಮಾಡುತ್ತಿರುವ ಅನೇಕ ಜನರಿಗೆ ಈಗ ಬದುಕು ನಡೆಸುವುದು ಕಷ್ಟವಾಗುತ್ತಿದೆ. ಹೊಸದಾಗಿ ಆದೇಶ ಪ್ರತಿ ಪಡೆಯುವಂತೆ ಸೂಚಿಸಿರುವ ಕ್ರಮ ಸರಿಯಲ್ಲ. ಹಾಲಿ ನೀಡಿರುವ ಆದೇಶ ಪ್ರತಿಯನ್ನು ಪರಿಗಣಿಸಿ ಮಾಸಾಶನ ಸೌಲಭ್ಯ ಮುಂದುವರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನಂತರ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಅರ್ಪಿಸಿದರು. ಅಧ್ಯಕ್ಷ ಬಾಲರಾಜು, ಟೌನ್ ಅಧ್ಯಕ್ಷ ಬಾಳೆಎಲೆ ಕುಮಾರ್, ಕಾರ್ಯದರ್ಶಿ ರಾಘವೇಂದ್ರಸ್ವಾಮಿ, ತಲಕಾಡು ಮಂಜು, ಮಹಾದೇವ್, ಮನ್ನೆಹುಂಡಿ ಶೇಖರ್, ಬನ್ನೂರು ರಘು, ಲೋಕೇಶ್, ಬಾಬು, ನಾಗರಾಜು, ಸಿದ್ದಪ್ಪಾಜಿ, ನಯೀಂ, ವಿಜಯ್‌ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.