ADVERTISEMENT

ಲಕ್ಷ್ಮಣತೀರ್ಥ ನದಿ ದಂಡೆಯಲ್ಲಿ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 6:47 IST
Last Updated 14 ಡಿಸೆಂಬರ್ 2012, 6:47 IST
ಹುಣಸೂರಿನ ಲಕ್ಷ್ಮಣತೀರ್ಥ ನದಿಯಲ್ಲಿ ಪ್ರಥಮ ಬಾರಿಗೆ ಸೇವ್ ಅವರ್ ಅರ್ಥ್ ಕ್ಲಬ್‌ನವರು ಕಾರ್ತಿಕ ಮಾಸದ ಅಂಗವಾಗಿ ಬುಧವಾರ ಆಯೋಜಿಸಿದ್ದ ದೀಪೋತ್ಸವದಲ್ಲಿ ಮಕ್ಕಳು ಭಾಗವಹಿಸಿದ್ದವು.
ಹುಣಸೂರಿನ ಲಕ್ಷ್ಮಣತೀರ್ಥ ನದಿಯಲ್ಲಿ ಪ್ರಥಮ ಬಾರಿಗೆ ಸೇವ್ ಅವರ್ ಅರ್ಥ್ ಕ್ಲಬ್‌ನವರು ಕಾರ್ತಿಕ ಮಾಸದ ಅಂಗವಾಗಿ ಬುಧವಾರ ಆಯೋಜಿಸಿದ್ದ ದೀಪೋತ್ಸವದಲ್ಲಿ ಮಕ್ಕಳು ಭಾಗವಹಿಸಿದ್ದವು.   

ಹುಣಸೂರು: ಲಕ್ಷ್ಮಣತೀರ್ಥ ನದಿಯ ದಂಡೆಯಲ್ಲಿ ಬುಧವಾರ ಕಾರ್ತಿಕ ಮಾಸದ ದೀಪೋತ್ಸವ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಟ್ಟಣದ ನೂರಾರು ಮಂದಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಸೇವ್ ಅವರ್ ಅರ್ಥ್ ಕ್ಲಬ್ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ  `ಲಕ್ಷಣ ತೀರ್ಥ ಹೊನಲು ಮೇಲೆ ಕಾರ್ತಿಕೆಯ ದೀಪ ಲೀಲೆ' ಕಾರ್ಯಕ್ರಮದಲ್ಲಿ ಹಿಂದು, ಮುಸ್ಲಿಂ ಮತ್ತು  ಕ್ರಿಶ್ಚಿಯನ್ ಧರ್ಮ ಗುರುಗಳನ್ನು ಆಹ್ವಾನಿಸಿ ಶಾಂತಿ ಮಂತ್ರ ಪಠಣ ಮಾಡುವ ಮೂಲಕ ನದಿ ದಂಡೆಯಲ್ಲಿ ದೀಪ ಬೆಳಗಿಸಿದರು.

ನದಿಯಲ್ಲಿ ಸಾಂಕೇತಿಕವಾಗಿ ದೀಪ ಹಚ್ಚಿ ನೀರಿಗೆ ಅರ್ಪಿಸುವ ಮೂಲಕ ಕಾರ್ತಿಕ ಮಾಸದ ದೀಪೋತ್ಸವಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರು ಮತ್ತು ಪುರುಷರು ದೀಪ ಬೆಳಗಿಸಿ ನದಿಗೆ ಬಿಡುವ ಬದಲಿಗೆ ದಡದಲ್ಲಿ ಸಾಲಾಗಿ ಇಟ್ಟರು. ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ, ಮೌಲ್ವಿ ಮುಸ್ತಾಫ್ ಮತ್ತು ಫಾದರ್ ಸಿರಿನ್ ಡಿಸೋಜ ಬೆಳಕಿನ ಮಹತ್ವವನ್ನು ತಿಳಿಸಿದರು.

ಪಟ್ಟಣದ ಯುವಕರು ಭೂದೇವಿಯೊಡಲಿಗೆ ಯುವ ನಮನ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿ ಪ್ರಕೃತಿ ಮತ್ತು ಪರಿಸರ ಉಳಿಸಿ ಬೆಳೆಸುವ ಸಂದೇಶ ಸಾರಿದರು.

ನದಿ ಸ್ವಚ್ಛತೆಗೆ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ನದಿಗೆ ಸಾವಿರಾರು ದೀಪ ಬಿಡುವುದರಿಂದ ಮಾಲಿನ್ಯ ಮಾಡಿದಂತಾಗುತ್ತದೆ. ಈ ಕಾರಣದಿಂದ ನದಿ ದಡದಲ್ಲಿ ದೀಪ ಹಚ್ಚಿ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು ಎಂದು ಸೇವ್ ಅವರ್ ಅರ್ಥ್ ಕ್ಲಬ್ ಕಾರ್ಯದರ್ಶಿ ಸೈಯದ್ ಅಹಮದ್ ಷಾ ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಹರೀಶ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಾಯಿನಾಥ್, ಸೇವ್ ಅವರ್ ಅರ್ಥ್ ಕ್ಲಬ್ ಸದಸ್ಯರು                   ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.