ADVERTISEMENT

ವಿಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 9:30 IST
Last Updated 7 ಫೆಬ್ರುವರಿ 2011, 9:30 IST

ಹುಣಸೂರು: ಸರ್ಕಾರ ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದರಿಂದ ಯೋಜನೆಗಳು ಧೂಳು ಹಿಡಿಯುತ್ತಿದೆ ಎಂದು ಸಂಸದ ಎಚ್.ವಿಶ್ವನಾಥ್ ಹೇಳಿದರು. ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರ ಸಾಮರಸ್ಯದಿಂದ ಹೊಂದಾ ಣಿಕೆ ಮಾಡಿಕೊಂಡು ಹೆಜ್ಜೆ ಹಾಕಿದ್ದರೆ ಅಭಿವೃದ್ಧಿ ತನ್ನಷ್ಟಕ್ಕೆ ತಾನೇ ಆಗುತ್ತಿತ್ತು ಎಂದರು.

ತಾಲ್ಲೂಕಿನ ವಿವಿಧ ಹಾಡಿಗೆ ಶಾಸಕ ಎಚ್.ಪಿ.ಮಂಜುನಾಥ್ ಅವ ರೊಂದಿಗೆ ಭಾನುವಾರ ಭೇಟಿ ನೀಡಿದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಸಚಿವರು ವಿರೋಧ ಪಕ್ಷದ ಮುಖಂಡರ ಸಲಹೆ ಸ್ವೀಕರಿಸುವ ಮನಸ್ಥಿತಿ ಇಲ್ಲದೆ ಎಲ್ಲವನ್ನು ಅನುಮಾನದಿಂದ ನೋಡುವುದರಿಂದ ಅಭಿವೃದ್ಧಿ ಶೂನ್ಯವಾಗಿದೆ ಎಂದರು.

ಮೈಸೂರು ಮತ್ತು ಮಡಿಕೇರಿ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಯಲು ತಡೆಗೋಡೆ ನಿರ್ಮಿಸುವ ಬಗ್ಗೆ ಮೈಸೂರಿನಲ್ಲಿ ಆನೆ ಮತ್ತು ಮಾನವನ ಸಂಘರ್ಷ ಸಂಬಂಧಿಸಿದಂತೆ ವಿಚಾರ ಚರ್ಚಿಸಿ ವರದಿ ಸಿದ್ಧಗೊಳಿಸಲು ಮೂರು ಸಮಿತಿಗಳನ್ನು ರಚಿಸಲಾಗಿತ್ತು. ಈ ಸಮಿತಿಯ ವರದಿ 9 ತಿಂಗಳ ನಂತರ ತಮ್ಮ ಕೈ ಸೇರಿದೆ ಎಂದರು.

ಹಣ ಬಿಡುಗಡೆ
: ತಡೆ ಗೋಡೆ ನಿರ್ಮಿಸಲು ಕೇಂದ್ರ ಸರ್ಕಾರ ಈಗಾಗಲೇ ಹಣ ಬಿಡುಗಡೆ ಮಾಡಿದೆ. ಯೋಜನೆ ಅನುಷ್ಠಾನದಲ್ಲಿ ಏರು ಪೇರಾಗಿದೆ. ತಡೆಗೋಡೆ ಯಾವ ರೀತಿ ನಿರ್ಮಿಸಬೇಕು? ಎಂಬ ಸ್ಪಷ್ಟ ಚಿತ್ರಣ ಈವರೆಗೂ ಸಿಗದೆ ಗೊಂದಲದಲ್ಲಿದೆ ಎಂದು ಪ್ರಶ್ನೆಗೆ ತಿಳಿಸಿದರು. 

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬೆಂಗಳೂರು- ಕನಕಪುರ ರಸ್ತೆಯಲ್ಲಿರುವ ಅನೇಕ ಬಹುಮಹಡಿಗಳು ಎನ್.ಜಿ.ಒ. ಸಂಸ್ಥೆ ನಡೆಸುತ್ತಿರುವ ಮುಖ್ಯಸ್ಥರಿಗೆ ಸೇರಿದೆ. ಗಿರಿಜನರ ಹೆಸರಿನಲ್ಲಿ ಸಂಸ್ಥೆಯ ಮುಖ್ಯಸ್ಥರು ಆಸ್ತಿವಂತರಾಗುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರದ ಆಡಿಟ್ ಬ್ಯೂರೋ ಜನರಲ್‌ಗೆ ಪತ್ರ ಬರೆದು ಲೆಕ್ಕ ಪತ್ರ ತನಿಖೆ ನಡೆಸುವಂತೆ ಪತ್ರ ಮೂಲಕ ಒತ್ತಾಯಿಸಿದ್ದೇನೆ ಎಂದರು.

ಮೈಸೂರು- ಮಡಿಕೇರಿ ರೈಲು: ಕಳೆದ ವರ್ಷ ಆಯವ್ಯಯದಲ್ಲಿ ಕೇಂದ್ರ ಸರ್ಕಾರ ಮೈಸೂ–ರಿನಿಂದ ಮಡಿಕೇರಿಗೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಗೆ ಹಸಿರು ನಿಶಾನೆ ನೀಡಿತ್ತು. ಈ ಯೋಜನೆಯನ್ನು ಸಾಮಾಜಿಕ ಅಪೇಕ್ಷಣಿಯ ಯೋಜನೆಯಲ್ಲಿ ತೆಗೆದುಕೊಂಡಿದೆ. 120 ಕಿ.ಮಿ ದೂರವನ್ನು ಎರಡು ಹಂತದಲ್ಲಿ ಅಭಿವೃದ್ಧಿ ಮತ್ತು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. ಪ್ರಥಮ ಹಂತದಲ್ಲಿ ಮೈಸೂರಿನಿಂದ ಕುಶಾಲನಗರದವರೆಗೆ 80 ಕಿ.ಮೀ. ದೂರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಅಂದಾಜು 400 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಿದ್ದೇವೆ.

ಮೈಸೂರು ಮತ್ತು ಮಡಿಕೇರಿ ರೈಲು ಸಂಪರ್ಕ ಕಲ್ಪಿಸಲು ಸರ್ವೆ ಕಾರ್ಯಕ್ಕೆ ಈಗಾಗಲೇ ರೂ 5 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ ಎಂದರು.ಬುಕಿಂಗ್ ಕಚೇರಿ: ಕುಶಾಲನಗರದಲ್ಲಿ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಅನುಕೂಲವಾಗಲು ಸ್ಥಳ ಕಾದಿರಿಸುವ ವ್ಯವಸ್ಥೆ ಕಚೇರಿ ಆರಂಭಿಸುತ್ತಿದ್ದು, ಈ ಕಚೇರಿ  ಕಾರ್ಯ ಚಟುವಟಿಕೆ ಮತ್ತು ಸರ್ವೆ ಕಾರ್ಯಕ್ಕೆ ಕೇಂದ್ರದ ರಾಜ್ಯ ರೈಲ್ವೆ ಸಚಿವ ಮುನಿಯಪ್ಪನವರು ಶೀಘ್ರದಲ್ಲೇ ಹಸಿರು ನಿಶಾನೆ ತೋರಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.