ಮೈಸೂರು: `ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳು ಬರೀ ಪದವಿ ನೀಡಲು ಮಾತ್ರ ಸೀಮಿತವಾಗಿದ್ದು, ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾದಂತೆ ಕಂಡು ಬರುತ್ತಿವೆ~ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜ್ ಬೇಸರ ವ್ಯಕ್ತಪಡಿಸಿದರು.
ನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜಿನಲ್ಲಿ (ಕಾವಾ) ಗುರುವಾರ ಏರ್ಪಡಿಸಿದ್ದ `ದಿ ಐ~ ಗೋಡೆ ಪತ್ರಿಕೆಯ ಬೆಳ್ಳಿ ಹಬ್ಬ ಹಾಗೂ ನೂತನ ಚಿಹ್ನೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
`ದೃಶ್ಯ ಮತ್ತು ಕಲಾ ವಿಭಾದಲ್ಲಿ ಕಾವಾ ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡುತ್ತಿದೆ. ಇದರಿಂದ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ~ ಎಂದು ಹೇಳಿದರು.
ನೂತನ ಕಟ್ಟಡ: `ಕಾವಾ ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕೆ ಇದ್ದ ಅಡೆತಡೆಗಳು ಬಗೆ ಹರಿದಿವೆ. ರೂ. 2.5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಈ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ನೂತನ ಕಟ್ಟಡದ ಕನಸನ್ನು ನನಸಾಗಿಸಿಕೊಳ್ಳಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜೊತೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು~ ಎಂದು ಸೂಚಿಸಿದರು.
ಮೈಸೂರು ವಿವಿ ಸ್ನಾತಕೋತ್ತರ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಡಾ.ಎನ್.ಉಷಾರಾಣಿ `ದಿ ಐ~ ನೂತನ ಚಿಹ್ನೆಯನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು. `ದಿ ಐ~ ಚಿಹ್ನೆಯನ್ನು ರಚಿಸಿರುವ ಕಾವಾ ವಿದ್ಯಾರ್ಥಿನಿ ಎಚ್.ಎಸ್.ಪರಿಣಿತ ಅವರಿಗೆ ಪತ್ರಕರ್ತ ರವೀಂದ್ರ ಭಟ್ ಬಹುಮಾನ ನೀಡಿದರು.ಕಾವಾ ಡೀನ್ ವಿ.ಎ.ದೇಶಪಾಂಡೆ, ಛಾಯಾಚಿತ್ರ ಮತ್ತು ಛಾಯಾ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಪ್ರೀತಿ ಕಪೂರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.