ಮೈಸೂರು: ವೇತನ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿಯ ನೂರಾರು ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು.
ಸಿಐಟಿಯು ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ನೌಕರರು, ಹಲವು ತಿಂಗಳಿಂದ ಕನಿಷ್ಠ ವೇತನವನ್ನೂ ನೀಡದೇ ವಂಚಿಸಲಾಗುತ್ತಿದೆ ಎಂದು ಧಿಕ್ಕಾರ ಕೂಗಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಸವರಾಜು ಮಾತನಾಡಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು 2017ರ ಅ. 30ರಂದು ಹೊರಡಿಸಿರುವ ಆದೇಶದಲ್ಲಿ ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್ಗಳಿಗೆ ₹ 12,887, ಪಂಪ್ ಆಪರೇಟರ್ಗಳಿಗೆ ₹ 11,353, ಜವಾನರಿಗೆ ₹ 10,775, ಕಸ ಗುಡಿಸುವರರು ₹ 13,635 ನೀಡಬೇಕು ಸೂಚಿಸಲಾಗಿದೆ. ಆದರೆ, ಆದೇಶವಾಗಿ 7 ತಿಂಗಳು ದಾಟಿದ್ದರೂ ಪಿಡಿಒಗಳು ವೇತನ ನೀಡದೇ ಸತಾಯಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೇತನವನ್ನು ಮಾಸಿಕ ಇಎಫ್ಎಂಎಸ್ ಮೂಲಕ ನೀಡಬೇಕು. 17 ತಿಂಗಳಿಂದ ಇರುವ ಬಾಕಿವೇತನ ನೀಡಬೇಕು. ಅನುಮೋದನೆ ಆಗದೇ ಇರುವ ಸಿಬ್ಬಂದಿಗೆ ಶೀಘ್ರ ಅನುಮೋದನೆ ನೀಡಬೇಕು. ನಿವೃತ್ತರಾಗುವ ನೌಕರರಿಗೆ ಉಪಧನ ನೀಡಬೇಕು. ಪಂಪ್ ಆಪರೇಟರ್ ಹಾಗೂ ಇತರ ಸಿಬ್ಬಂದಿಗೆ ಬಿಲ್ ಕಲೆಕ್ಟರ್ ಹುದ್ದೆಗೆ ತರಬೇತಿ ನೀಡಬೇಕು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾಗಿ 10 ವರ್ಷ ಸೇವೆ ಸಲ್ಲಿಸಿರುವ ಬಿಲ್ ಕಲೆಕ್ಟರ್ಗಳಿಗೆ ಗ್ರೇಡ್– 2 ಕಾರ್ಯದರ್ಶಿ ಹುದ್ದೆ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಸಮಿತಿ ಖಜಾಂಚಿ ಲೋಕೇಶ್, ಕಾರ್ಯದರ್ಶಿ ಮಣಿಗೌಡ, ಮುಖಂಡರಾದ ಸಿದ್ದರಾಜು, ಪ್ರಕಾಶ ಕಣಗಲ್, ಡಿ.ಎಂ.ಮಾದೇಶ, ನಂಜುಂಡಸ್ವಾಮಿ, ವರುಣ ನಾಗರಾಜ, ಚೆಲುವೇ ಗೌಡ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.