ADVERTISEMENT

ಸಂಶೋಧನೆ ಫ್ಯಾಶನ್ ಆಗಬಾರದು: ಕಟೋಚ್

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 8:45 IST
Last Updated 10 ಫೆಬ್ರುವರಿ 2011, 8:45 IST

ಮೈಸೂರು: ‘ಇತ್ತೀಚಿನ ದಿನಗಳಲ್ಲಿ ಸಂಶೋಧನೆ ಫ್ಯಾಶನ್ ಆಗಿ ಮಾರ್ಪಡುತ್ತಿದೆ. ಗಂಭೀರವಾಗಿ ಸಂಶೋಧನೆ ನಡೆಸುತ್ತಿರುವವರ ಸಂಖ್ಯೆ ವಿರಳವಾಗುತ್ತಿದೆ’ ಎಂದು ಕೇಂದ್ರ ಆರೋಗ್ಯ ಸಂಶೋಧನಾ ಇಲಾಖೆ ಕಾರ್ಯದರ್ಶಿ ಡಾ.ವಿಶ್ವ ಮೋಹನ್ ಕಟೋಚ್  ವಿಷಾದಿಸಿದರು.

ಜೆಎಸ್‌ಎಸ್ ವಿಶ್ವವಿದ್ಯಾನಿಲಯದ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ ನಡೆದ ‘ಘಟಿಕೋತ್ಸವ -2011’ಕಾರ್ಯಕ್ರಮದಲ್ಲಿ ಮಾತನಾಡಿದರು.‘ವೈದ್ಯಕೀಯ ಸಂಶೋಧನೆ  3 ಸಾವಿರ ವರ್ಷ ಹಿಂದಿನಿಂದಲೂ ಇದೆ. ಎಲ್ಲದ್ದಕ್ಕೂ ಇಂದು ಪಾಶ್ಚಾತ್ಯರನ್ನು ಅನುಕರಿಸಲಾಗುತ್ತಿದೆ. ಆದರೆ ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಾಗಲೇ ಅನೇಕ ಸಾಧನೆ ಮಾಡಿದೆ. ಪಾಶ್ಚಾತ್ಯರ ಅನುಕರಣೆ ಬಿಡಬೇಕು’ ಎಂದರು.

‘ಎಚ್1ಎನ್1 ಕಾಯಿಲೆ ಬಂದಾಗ ಅದು ಎಲ್ಲರಿಗೂ ಸವಾಲಾಗಿತ್ತು. ಈ ಕಾಯಿಲೆಗೆ ಸಂಬಂಧಿಸಿದಂತೆ ಪರೀಕ್ಷೆ, ಸಂಶೋಧನೆ ಮಾಡಲು ಭಾರತದಲ್ಲಿ ಕೇವಲ ಎರಡು ಪ್ರಯೋಗಾಲಯಗಳು ಇದ್ದವು. ಆದರೆ ಪ್ರಸ್ತುತ 44 ಪ್ರಯೋಗಾಲಯಗಳು ಇವೆ. ಯುವ ವೈದ್ಯರು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಬಿ.ಎನ್.ಬೆಟಕೆರೂರ್, ಜೆಎಸ್‌ಎಸ್ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಬಿ. ಸುರೇಶ್, ಕುಲಸಚಿವ ಡಾ.ಮೃತ್ಯುಂಜಯ ಪಿ.ಕುಳೇನೂರ್, ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಸವನ ಗೌಡಪ್ಪ ಇದ್ದರು. ಕಾರ್ಯಕ್ರಮದಲ್ಲಿ ಡಾ.ವಿಶ್ವ ಮೋಹನ ಕಟೋಚ್ ಅವರನ್ನು ಸನ್ಮಾನಿಸಲಾಯಿತು.

2011-12ನೇ ಸಾಲಿನಲ್ಲಿ ಒಂದು ವರ್ಷದ ಗೃಹ ವೈದ್ಯ ತರಬೇತಿ ಮುಗಿಸಿದ 115  ವೈದ್ಯಕೀಯ ಪದವೀಧ ರಿಗೆ ಪದವಿ ಪ್ರದಾನ ಮಾಡಲಾಯಿತು. ಇದಕ್ಕೂ ಮುನ್ನ ಪದವೀಧರರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. 

ಚಿನ್ನದ ಪದಕ ಮತ್ತು ನಗದು ಬಹುಮಾನ ವಿಜೇತರು
ಡಾ.ಸ್ವಾರ್ತಿಕ ಮಜುಂದಾರ್ (ಅಂಬಾಬಾಯಿ ನಂಜುಂಡಯ್ಯ ಸ್ಮಾರಕ ಚಿನ್ನದ ಪದಕ, ಉತ್ತಮ ವಿದ್ಯಾರ್ಥಿನಿ, ಡಾ.ಮನ್ನಾರಕೃಷ್ಣ ಸ್ಮಾರಕ ಚಿನ್ನದ ಪದಕ, ಡಾ.ಡಿ.ಎಸ್.ಶಿವಪ್ಪ ಸ್ಮಾರಕ ಚಿನ್ನದ ಪದಕ, ಎಂ.ಬಿ.ಪರಮೇಶ್ವರಪ್ಪ ಸ್ಮಾರಕ ಚಿನ್ನದ ಪದಕ, ಡಾ.ಎಂ.ಕೆ.ಮೀರಾ ಚಿನ್ನದ ಪದಕ) ಡಾ.ಸಿ.ಸ್ವರಮ್ಯ

(ಎಂ.ಎನ್.ಬಸವರಾಜಯ್ಯ ಸ್ಮಾರಕ ಚಿನ್ನದ ಪದಕ, ಅಪೊಲೊ ಚಿನ್ನದ ಪದಕ) ಡಾ.ಎಂ.ಡಿ.ಕೃಷ್ಣ ನಾರಾಯಣ (ಸರ್ಜರಿಯಲ್ಲಿ ಹೆಚ್ಚು ಅಂಕ ಗಳಿಸಿದ್ದಕ್ಕೆ ಡಾ.ಎಂ.ಎನ್.ಚನ್ನಬಸಪ್ಪ ಸ್ಮಾರಕ ಬಹುಮಾನ)

ಚಿನ್ನದ ಪದಕ ಮತ್ತು ನಗದು ಬಹುಮಾನ (ಸ್ನಾತಕೋತ್ತರ ಪದವಿ): ಡಾ.ಸಜಿದ್ ಸಯ್ಯದ್ (ಅಪೊಲೊ ಚಿನ್ನದ ಪದಕ),  ಡಾ.ಪ್ರವೀಣ್‌ಕುಮಾರ್ (ಅಪೊಲೊ ಚಿನ್ನದ ಪದಕ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.